
ತುಮಕೂರು, ಆ. ೯- ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ವಿನೂತ .ಪಿ ಅವರು ಪತ್ರಿಕೋಧ್ಯಮ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಸ್ವರ್ಣ ಪದಕ ಪಡೆದಿದ್ದಾರೆ.
ತುಮಕೂರು ವಿಶ್ವಾವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವದಲ್ಲಿ ಹಾಲಪ್ಪ ಫೌಂಡೆಷನ್ ವತಿಯಿಂದ ಕೊಡ ಮಾಡುವ ಸ್ವರ್ಣ ಪದಕವನ್ನು ಪತ್ರಿಕೋದ್ಯಮ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಲಭಿಸಿರುವುದು ಸಂತಸ ತಂದಿದೆ.
ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿಯ ಕುಂದೂರು ಪಾಳ್ಯದ ನಿವಾಸಿಯಾಗಿರುವ ವಿನೂತ ಅವರ ತಂದೆ ಪ್ರಕಾಶ್ ೨೦೧೩ ರಲ್ಲಿ, ತಾಯಿ ರೇಣುಕಮ್ಮ ೨೦೦೫ ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇವರನ್ನು ನೋಡಿಕೊಳ್ಳುತ್ತಿದ ಅಜ್ಜಿ ಸಹ ೨೦೧೯ ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಇವರ ತಾತ ಕೂಡಾ ಇದಕ್ಕೂ ಮೊದಲೇ ಮೃತಪಟ್ಟಿದ್ದರು. ಇನ್ನು ವಿನೂತಗೆ ಒಬ್ಬಳು ತಂಗಿ ಇದ್ದು, ಇಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾಳೆ. ವಿನೂತ ಬಾಣಸಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತುರುವೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ, ಬಾಣಸಂದ್ರದ ವಿಎಸ್ಎಸ್ ಪ.ಪೂ. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಬಿಎ ಪತ್ರಿಕೋದ್ಯಮ ಪದವಿಯನ್ನು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ತುಮಕೂರು ವಿಶ್ವವಿದ್ಯಾನೀಲಯದಿಂದ ಸ್ವರ್ಣ ಪದಕ ಪಡೆದು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾರೆ.
ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಈ ಇಬ್ಬರು ವಿದ್ಯಾರ್ಥಿನಿಯರಿಗೆ ಇವರು ತಂದೆ ಬೆಳೆಸಿದ ೨೦ ತೆಂಗಿನ ಮರದಿಂದ ಜೀವನ ಮತ್ತು ತಮ್ಮ ವಿದ್ಯಾಭ್ಯಾಸ ಮಾಡುತ್ತಿರುವ ವಿನೂತ ಪಿ. ಮುಂದೆ ಐಎಎಸ್ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದು, ಉನ್ನತ ಹುದ್ದೆಗೆ ಹೋಗುವ ಗುರಿ ಹೊಂದಿದ್ದು, ತಮ್ಮ ತಂದೆ-ತಾಯಿ ಆಸೆಯಂತೆ ಉನ್ನತ ಹುದ್ದೆಗೆ ಹೋಗಲು ಬಯಸಿ, ಜತೆಗೆ ತಂಗಿಯನ್ನು ಉನ್ನತ ವ್ಯಾಸಂಗ ಮಾಡಿಸಲು ಶ್ರಮ ವಹಿಸಿದ್ದಾರೆ.