
ಬೆಂಗಳೂರು,ಮಾ.೧೧- ಚಿಕ್ಕಪೇಟೆ ಕ್ಷೇತ್ರದಲ್ಲಿ ಜನಪರ ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಆರ್.ವಿ. ದೇವರಾಜ್ ಇದೀಗ ಯುಗಾದಿ ಹಬ್ಬಕ್ಕೆ ಕ್ಷೇತ್ರದ ಜನರಿಗೆ ಪಡಿತರ ಕಿಟ್ ವಿತರಣೆ ಆರಂಭಿಸಿದ್ದಾರೆ. ಒಟ್ಟು ತಲಾ ೩೫ ಸಾವಿರ ರೇಷನ್ ಕಿಟ್, ಸೀರೆ, ಕುಕ್ಕರ್, ಹಾಟ್ ಬಾಕ್ಸ್ ಗಳು ಮತ್ತು ತಿರುಪತಿ ಲಡ್ಡುಗಳನ್ನು ವಿತರಣೆ ಮಾಡುತ್ತಿದ್ದಾರೆ.
ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಕ್ಷೇತ್ರಗಳಿಂದ ನಾಲ್ಕು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ನ ಆರ್.ಎ. ದೇವರಾಜ್ ಇದೀಗ ಚಿಕ್ಕಪೇಟೆ ಕ್ಷೇತ್ರದಿಂದ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಕಣಕ್ಕಿಳಿಯುವುದು ಖಚಿತವಾಗಿದೆ. ಪೂರ್ವತಯಾರಿ ನಡೆಸಿದ್ದು, ಕ್ಷೇತ್ರದ ಜನರ ಮಧ್ಯೆಯೇ ಇದ್ದು ಕಳೆದ ನಾಲ್ಕೂವರೆ ವರ್ಷದಿಂದ ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಹಲವು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಕೆಎಸ್ಆರ್ಟಿಸಿ ಅಧ್ಯಕ್ಷರಾಗಿ ರಾಜಹಂಸ, ಐರಾವತದಂತಹ ಬಸ್ ಗಳನ್ನು ಪರಿಚಯಿಸಿದ್ದ ದೇವರಾಜ್, ತನ್ನ ಆ ಅನುಭವವನ್ನು ಚಿಕ್ಕಪೇಟೆ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ, ಆಧುನಿಕತೆಗೆ ತಕ್ಕಂತೆ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಶಾಸಕರಾಗಿದ್ದಾಗ ಸರಕಾರದ ಸೌಲಭ್ಯ ಗಳನ್ನು ಬಳಸಿಕೊಂಡು, ಕೊಳಗೇರಿ ನಿವಾಸಿಗಳ ೨೦೦೦ ಮನೆಗಳು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಸ್ವಚ್ಛತೆಗೆ ಆದ್ಯತೆ, ಕೆರೆಗಳಿಗೆ ಕಾಯಕಲ್ಪ, ಆಸ್ಪತ್ರೆಗಳ ಉನ್ನತೀಕರಣ ಮುಂತಾದ ಹಲವು ಕಾರ್ಯಕ್ರಮ ಗಳನ್ನು ಜಾರಿಗೆ ತಂದಿದ್ದರು. ಸರಕಾರಿ ಶಾಲೆಗಳಲ್ಲೂ ಖಾಸಗಿಯಷ್ಟೇ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಪ್ರತಿ ದಿನಿ ೪೦ಟಾನ್ ತರಕಾರಿಗಳು ಬಡವರಿಗೆ ಆಹಾರದ ಕಿಟ್, ಔಷಧ ಖರೀದಿಗೆ ನೆರವು ಮುಂತಾದ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಉದ್ಯೋಗ ಮೇಳ ಆಯೋಜಿಸಿ ಸಹಸ್ರಾರು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಆರ್.ವಿ.ದೇವರಾಜ್ ಅವರ ಸಾಮಾಜಿಕ ಚಟುವಟಿಕೆಗಳಿಗೆ ಅವರ ಪತ್ನಿ ಡಾ.ಮಮತಾ ದೇವರಾಜ್ ಜೊತೆಯಾಗಿದ್ದಾರೆ. ಪುತ್ರ ಆರ್.ವಿ. ಯುವರಾಜ್ ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದರು. ಅವಧಿ ಮುಗಿದ ಬಳಿಕವೂ ತಂದೆಯ ಜತೆಗೆ ನಿಂತು ಕ್ಷೇತ್ರದ ಜನರಿಗೆ ಸ್ಪಂದಿಸುತ್ತಿದ್ದಾರೆ.