ಚಾಲಕರ ಮುಷ್ಕರ 28 ಕಿ.ಮೀ. ನಡೆದ ವರ

ಭುವನೇಶ್ವರ, ಮಾ ೧೮- ಒಡಿಶಾದಲ್ಲಿ ಚಾಲಕರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಸಿಗದೇ ವರ ಹಾಗೂ ಆತನ ಕುಟುಂಬದವರು ರಾತ್ರಿಯಿಡೀ ೨೮ ಕಿಲೋಮೀಟರ್ ನಡೆದುಕೊಂಡು ವಧುವಿನ ಗ್ರಾಮದ ತಲುಪಿದ ಸ್ವಾರಸ್ಯಕರ ಘಟನೆಯೊಂದು ಒಡಿಶಾದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ವರ ಸೇರಿದಂತೆ ಇಡೀ ಮದುವೆ ದಿಬ್ಬಣ ಗುರುವಾರ ರಾತ್ರಿಯಿಡೀ ನಡೆದುಕೊಂಡೇ ಹೋಗಿ ದಿನಳಪಾಡು ಗ್ರಾಮಕ್ಕೆ ತಲುಪಿದೆ. ಇದಾದ ಬಳಿಕ ಹೊಸ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಕೆಲ ಮಂದಿ ಮಹಿಳೆಯರೂ ಸೇರಿದಂತೆ ವರ ಹಾಗೂ ಆತನ ಕುಟುಂಬದ ಸದಸ್ಯರು ರಾತ್ರಿಯಿಡೀ ನಡೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಾಲಕರ ಮುಷ್ಕರದಿಂದಾಗಿ ಯಾವುದೇ ವಾಹನ ಸಿಗಲಿಲ್ಲ. ವಧುವಿನ ಗ್ರಾಮ ತಲುಪಲು ನಾವು ರಾತ್ರಿಯಿಡೀ ನಡೆದೆವು. ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ವರನ ಕುಟುಂಬದವರು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ವಿವಾಹ ನಡೆದಿದ್ದು, ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ವಧುವಿನ ಮನೆಯಲ್ಲೇ ವರನ ಕಡೆಯ ಎಲ್ಲರೂ ತಂಗಿದ್ದಾರೆ.
ವಿಮೆ, ಪಿಂಚಣಿ, ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಲಕರ ಏಕತಾ ಮಹಾಸಂಘ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿತ್ತು.
ಒಡಿಶಾದಲ್ಲಿ ವಾಣಿಜ್ಯ ವಾಹನಗಳ ಚಾಲಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿದ ನಂತರ ಮುಷ್ಕರವನ್ನು ಸ್ಥಗಿತಗೊಳಿಸಲಾಯಿತು.