ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ವಿಜಯಪುರ,ಫೆ.25-ತನ್ನ ತಾಯಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿ ವ್ಯಕ್ತಿಯೊಬ್ಬನನ್ನು ಮಗ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಗುರುವಾರ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿಯ ಗಂಗನಗೌಡ ಹನಮಗೌಡ ಗೌಡರ ಹಾಗೂ ಮಂಜುನಾಥ ಯಲಗೂರದಪ್ಪ ಗೌಡರ ಶಿಕ್ಷೆಗೊಳಗಾದವರು.
ಶಿಕ್ಷೆಗೊಳಗಾದ ಆರೋಪಿ ಗಂಗನಗೌಡ ಗೌಡರ ತನ್ನ ತಾಯಿ ಅದೇ ಗ್ರಾಮದ ತಮ್ಮಣ್ಣ ಸಂಗಪ್ಪ ಮೋರ್ಕಿ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯ ವ್ಯಕ್ತಪಡಿಸಿ 2019ರ ಅಕ್ಟೋಬರ್ 13ರಂದು ಸಂಜೆ 6ಗಂಟೆ ಸುಮಾರಿಗೆ ತಮ್ಮಣ್ಣ ಮೋರ್ಕಿ ಹಡಲಗೇರಿ ಗ್ರಾಮದ ದ್ಯಾಮವ್ವನ ದೇವಸ್ಥಾನ ಹತ್ತಿರ ಹೋಗುವಾಗ ಹೊಂಚು ಹಾಕಿದ್ದ ಗಂಗನಗೌಡ ಗೌಡರ ಮತ್ತು ಆತನ ಸ್ನೇಹಿತ ಹಿಂಬದಿಯಿಂದ ಚಾಕುವಿನಿಂದ ಇರಿದಿದ್ದಾರೆ. ಇದನ್ನು ಬಿಡಿಸಲು ಬಂದ ತಮ್ಮಣ್ಣನ ಪತ್ನಿ ಹಾಗೂ ಮಗನಿಗೆ ಜೀವ ಬೆದರಿಕೆ ಹಾಕಿದ್ದಾರೆ. ತೀವ್ರ ರಕ್ತಸ್ತಾವದಿಂದ ತಮ್ಮಣ್ಣ ಮೋರ್ಕಿ ಸಾವನ್ನಪ್ಪಿದ್ದರು.
ಈ ಸಂಬಂಧ ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೆÇಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಅವರು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.