ಬೀದರ್: ಅ.11:ಕಮಲನಗರ: ತಾಲ್ಲೂಕಿನ ಬೇಂಬ್ರಾ ಗ್ರಾಮದ ರೈತ ಉಮಕಾಂತ ಪಾಟೀಲ ಅವರು ತಮ್ಮ ಹೊಲದಲ್ಲಿ ಚಂಡು ಹೂವು ಬೆಳೆದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ ಅಷ್ಟ ಗಂಧ ತಳಿಯ ಬೀಜ ನಾಟಿ ಹಚ್ಚಿದ್ದು ಎರಡು ತಿಂಗಳಿಗೆ ಇಳುವರಿ ಬರುತ್ತದೆ.
‘ಚಂಡು ಹೂವು ಬೆಳೆಯಲು ಭೂಮಿ ಹದ, ಬಿತ್ತನೆ, ರಸಗೊಬ್ಬ ಸೇರಿದಂತೆ ಇನ್ನಿತರ ಖರ್ಚು ಸೇರಿ ಸುಮಾರು ?40 ಸಾವಿರ ವೆಚ್ಚವಾಗಿದೆ.
ಅಧಿಕ ಇಳುವರಿ ಬರುತ್ತಿದೆ. ಅದಕ್ಕೆ ತಕ್ಕಂತೆ ಬೆಲೆಯೂ ಲಭಿಸುತ್ತಿದೆ’ ಎಂದು ರೈತ ಉಮಕಾಂತ ಪಾಟೀಲ ತಿಳಿಸುತ್ತಾರೆ.
ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ಚಂಡು ಹೂವಿಗೆ ?50 ರಿಂದ ?60 ಇದೆ. ಗೌರಿ-ಗಣೇಶ ಹಬ್ಬದಲ್ಲಿ ಕಮಲನಗರ, ಔರಾದ್, ಠಾಣಾಕುಶನೂರ, ಸಂತಪೂರ, ತೋರಣಾ ವ್ಯಾಪಾರಸ್ಥರು ನಮ್ಮ ಹೊಲದಲ್ಲಿ ಬೆಳೆದ ಹೂವುಗಳನ್ನು ತೆಗದುಕೊಂಡು ಹೋಗಿದ್ದು ಒಟ್ಟು 20ಕ್ವಿಂಟಾಲ್ ಹೂವು ಮಾರಿದ್ದೇವೆ. ಖರ್ಚು ಕಳೆದು ?1ಲಕ್ಷ ಲಾಭವಾಗಿದೆ ಎಂದು ಅವರು ತಿಳಿಸಿದರು.
ಅಷ್ಟ ಗಂಧ ತಳಿ ಬೀಜವನ್ನು 1 ಎಕರೆಗೆ 8 ಸಾವಿರ ಸಸಿ ಹಾಕುತ್ತಾರೆ. ಒಂದಕ್ಕೆ ?2.50 ಇದೆ. ತೋಟಗಾರಿಕೆ ಇಲಾಖೆಯಿಂದ ರೈತಗೆ ?10 ಸಾವಿರ ಸಬ್ಸಿಡಿಯನ್ನು ಕೊಡಿಸಿದ್ದೇವೆ. ಹೂವುಗಳಿಗೆ ದಸರಾ ದೀಪಾವಳಿಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತದೆ
-ಅಣ್ಣಾರಾವ್ ಪಾಟೀಲ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ