
ದಾವಣಗೆರೆ ಮಾ. 5; ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಆರೋಗ್ಯ ಸೇವೆÀಗಳನ್ನು ಒದಗಿಸಿರುವುದರ ಮೂಲಕ ಅಸಾಂಕ್ರಾಮಿ ರೋಗಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಕಾರ್ಯಗಾರದ ಮೂಲ ಉದ್ದೇಶವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ ಪಿ. ಪಟಗೆ ಹೇಳಿದರು.ಜಿಲ್ಲೆಯ ಅತ್ತಿಗೆರೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ‘ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಕ್ಷಯರೋಗ, ಅಪೌಷ್ಠಿಕತೆ, ರಕ್ತಹೀನತೆ, ಮಾನಸಿಕ ಆರೋಗ್ಯ, ಹದಿಹರೆಯದವರ ಸಮಸ್ಯೆಗಳು, ಬಾಲ್ಯ ವಿವಾಹ, ಮಕ್ಕಳು ಮತ್ತು ಮಹಿಳೆಯ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತು ಅರಿವು ಮೂಡಿಸಿದರು2025 ರ ಒಳಗೆ ಕ್ಷಯರೋಗ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನವನ್ನು ನಡೆಸುವ ಮೂಲಕ ಮಾರಣಾಂತಿಕ ಖಾಯಿಲೆ ಬಗ್ಗೆ ಗ್ರಾಮೀಣ ಜನರಲ್ಲಿರುವ ಕೀಳರಿಮೆ, ಭಯಭೀತಿಯನ್ನು ಹೋಗಲಾಡಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ಗ್ರಾಮದಲ್ಲಿ ನಡೆಸಲಾಗುತ್ತಿದೆ. ಕ್ಷಯ ರೋಗ ಕೂದಲು ಮತ್ತು ಉಗುರನ್ನು ಹೊರತು ಪಡಿಸಿ ಶರೀರದ ಎಲ್ಲಾ ಭಾಗಕ್ಕೂ ಹರಡಬಹುದು ಇದರಲ್ಲಿ ಶ್ವಾಸ ಕೋಶಕ ಕಾಯಿಲೆ ಹಾಗೂ ಶ್ವಾಸಕೋಶೇತರ ಕಾಯಿಲೆ ಎಂದು ಎರಡು ವಿಧಗಳಿದ್ದು, 2 ವಾರಕ್ಕಿಂತ ಹೆಚ್ಚು ಅವಧಿ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಕಫದಲ್ಲಿ ರಕ್ತ, ಎದೆ ನೋವು, ಹಸಿವು ಆಗದೇ ಇರುವುದು ಹಾಗೂ ತೂಕ ಕಡಿಮೆಯಾಗುವುದು ಇದರ ಲಕ್ಷಣವಾಗಿದ್ದು, ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ತರುವ ಮೂಲಕ ರೋಗಿಯನ್ನು ಪರೀಕ್ಷೆಗೆ ಒಳಪಡಿಸಬೇಕು ಪರೀಕ್ಷೆಯಲ್ಲಿ ಕ್ಷಯ ರೋಗ ಇರುವುದು ದೃಢಪಟ್ಟರೆ ನೇರವಾಗಿ ಅವರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಮತ್ತು ಆರು ತಿಂಗಳವರೆಗೆ ಸತತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ಮಾಹಿತಿ ನೀಡಿದರು.ತರಬೇತಿ ಕಾರ್ಯಾಗಾರದಲ್ಲಿ ಅತ್ತಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋಧಮ್ಮ ಮಹೇಂದ್ರಪ್ಪ, ಉಪಾಧ್ಯಕ್ಷರಾದ ಶ್ರೀಮತಿ ರೇಣುಕಮ್ಮ ಪರಸಪ್ಪ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಹೆಚ್.ಉಮಾಪತಿ, ಮ.ಮ.ಕ.ಇ ಮೇಲ್ವಿಚಾರಕರಾದ ಶ್ರೀಮತಿ ಶಿವಲೀಲಾ, ತಾಲ್ಲೂಕು ಪಂಚಾಯತ್ ಆರ್.ಡಿ.ಪಿ.ಆರ್ ಶ್ರೀಮತಿ ಶಾರದಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.