ಚಿಂಚೋಳಿ,ಜೂ.13- ತಾಲೂಕು ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಮಹಿಳಾ ನಿರ್ದೇಶಕರು, ನಾಮ ನಿರ್ದೇಶನಗೊಂಡ ನಿರ್ದೇಶಕರು ಮಂಡಳಿ ಸಭೆಗೆ ಗೈರು ಹಾಜರಾಗಿದ್ದರೂ, ಅವರ ಪರವಾಗಿ ಪತಿ, ಅಳಿಯ ಮತ್ತು ಪುತ್ರ ಮೂರು ಜನರು ಭಾಗವಹಿಸಿ ಸಭಾಭತ್ಯೆ ಪಡೆದಿರುತ್ತಾರೆ.
ನಿದೇರ್ಶಕರಲ್ಲದವರನ್ನು ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಸಭಾ ಅಧ್ಯಕ್ಷರ ಮತ್ತು ಬ್ಯಾಂಕಿನ ಉಪಾಧ್ಯಕ್ಷರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕಿನ ನಿದೇರ್ಶಕರಾದ ರಮೇಶ ಯಾಕಾಪೂರ ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಂಡಳಿಯ ನಿಯಮವಳಿಯನ್ನು ಉಲ್ಲಂಘಿಸಿದ ಆರೋಪದಡಿ ಇವರೆಲ್ಲರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಅವರನ್ನು ಮಂಡಳಿಯ ನಿರ್ದೇಶಕರ ಸ್ಥಾನದಿಂದ ವಜಾ ಮಾಡಬೇಕು ಎಂದು ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.