ಕಮಲನಗರ:ಮಾ.26: ಏಕತಾ ಜನಾಶೀರ್ವಾದ ಯಾತ್ರೆ ನಿಮಿತ್ಯ ಸಂಗನಾಳ, ಪೋ ಪಲಗಾಂವ ಮತ್ತು ಭವಾನಿ ಬಿಜಲಗಾಂವ ಗ್ರಾಮಗಳಿಗೆ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಅವರಿಗೆ ಭವ್ಯ ಸ್ವಾಗತ ಕೋರಿದರು. ತಾಲೂಕಿನ ಮತದಾರಬಾಂಧವರನ್ನು ಉದ್ದೇಶಿಸಿ ಮಾತನಾಡಿದ ರವೀಂದ್ರ ಸ್ವಾಮಿಯವರು ಈ ಸಲ ಸ್ವಾಭಿಮಾನಕ್ಕೆ ಬಲ ತುಂಬಬೇಕಾಗಿದೆ. ಇಪ್ಪತ್ನಾಲ್ಕು ತಾಸು ನಿಮಗೆ ಸ್ಥಳೀಯವಾಗಿ ಸಿಗುವ ಸೇವಕ ನಾಗಿದ್ದೇನೆ. ಅಲ್ಲದೇ ಇದೇ ಕಮಲನಗರ ತಾಲೂಕಿನ ಮನೆ ಮಗನಾಗಿದ್ದೇನೆ. ತಾಲೂಕಿನ ಜನರಿಗಾಗಿ ಏನಾದರೂ ಹೊಸದನ್ನು ಮಾಡುವ ಬಯಕೆ ನನ್ನದಾಗಿದೆ. ನೀವು ಒಮ್ಮೆ ಕೈಹಿಡಿದರೆ ಖಂಡಿತ ಔರಾದ ಹಾಗೂ ಕಮಲನಗರ ತಾಲೂಕಾ ಗಳನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವೆ ಎಂದು ಸ್ವಾಮಿ ತಿಳಿಸಿದರು.
ಬೆಳಕುಣಿ ಬಿ. ಗ್ರಾಮದ ಮುಖಂಡರಾದ ಶಿವಕುಮಾರ ಮೇತ್ರೆಯವರು ಮಾತನಾಡಿ “ರವೀಂದ್ರ ಸ್ವಾ,ಮಿ ಅವರು ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ. ಕಷ್ಟ ಎಂದು ಬಂದವರನ್ನು ಸಹಾಯಹಸ್ತ ಚಾಚಿದ್ದಾರೆ. ಹಲವು ಮಂದಿರ, ಮಸೀದಿಗಳನ್ನು ನಿರ್ಮಿಸಿ ಧಾರ್ಮಿಕ ಐಕ್ಯತೆ ಸಾರಿದ್ದಾರೆ. ಎಲ್ಲರೂ ನನ್ನವರೆಂದು ಸರ್ಕಾರಿ ಸೇವೆಗಳನ್ನು ಜನತೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇವರ ಈ ಕಾರ್ಯಕ್ಕಾಗಿ ಹಿಂದೆ ಬೀದರ ಜನತೆ ನಗರಸಭೆ ಸದಸ್ಯರಾಗಿ, ಹಾಗೂ ಬಿಜೆಪಿ ಪಕ್ಷವು ನಗರ ಘಟಕದ ಅಧ್ಯಕ್ಷತೆ ಸ್ಥಾನ ನೀಡಿತ್ತು. ಜನರ ಹೃದಯದಲ್ಲಿ ಸದಾ ನೆಲೆಸುವ ರವೀಂದ್ರ ಸ್ವಾಮಿಯವರಿಗೆ ಈ ಬಾರಿ ಆರಿಸಿ ತರೋಣ ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಸಂಗಮೇಶ ಪಾಟೀಲ, ಬಲವಂತ ಮೋಳಕೇರೆ, ವಿಕಾಸ ಪಾಟೀಲ, ಶಿವಕುಮಾರ ಮೇತ್ರೆ, ಪ್ರಕಾಶ ಪಾಟೀಲ, ಧನರಾಜ ಉದಗೀರೆ, ಶೇಷರಾವ ಡರಗಾವೆ, ಮಹಾದೇವ ಇದ್ದರು.