ಗ್ರಂಥ ಬಿಡುಗಡೆ, ಸನ್ಮಾನ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು3: ಇಲ್ಲಿನ ಪುರಸಭೆ ಉಮಾ ವಿದ್ಯಾಲಯದ ಪ್ರೌಢಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಸ್.ಎಫ್. ಆದಿ ಅವರ ಪುಲಿಗೆರೆ ಆದಿಶೇಖರ' ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಗುರುಗಳ ಸನ್ಮಾನ ಸಮಾರಂಭ ಪಟ್ಟಣದ ಜ.ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಜರುಗಿತು. ಶಾಸಕ ಡಾ.ಚಂದ್ರು ಲಮಾಣಿ ಗ್ರಂಥ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರುಶಿಕ್ಷಕ ವೃತ್ತಿ ಹೆಚ್ಚು ಪವಿತ್ರವಾದದ್ದು. ವಿದ್ಯೆ ಕಲಿಸುವ ಗುರುಗಳು ಹೇಗಿರುತ್ತಾರೆಯೋ ಹಾಗೆಯೇ ಶಿಷ್ಯರು ಆಗುತ್ತಾರೆ. ಸಮಾಜವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಶಿಷ್ಯರನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದವರು ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ಮಾಡಬೇಕು. ಅಂದಾಗ ಮಾತ್ರ ಶಾಂತಿಯ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರು `ಎಲ್ಲರಿಗೂ ಶಿಕ್ಷಣ ಅವಶ್ಯ. ಶಿಕ್ಷಣ ಇಲ್ಲದೆ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಒಳ್ಳೆ ಶಿಕ್ಷಣ ಮಕ್ಕಳನ್ನು ಮನುಷ್ಯರನ್ನಾಗಿ ಮಾಡುತ್ತದೆ. ಎಷ್ಟೇ ಕಷ್ಟ ಬಂದರೂ ಪಾಲಕರು ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು. ವಿದ್ಯೆ ಇಲ್ಲದೆ ಬದುಕು ಪರಿಪೂರ್ಣ ಆಗಲಾರದು’ ಎಂದರು.
ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಅನುಭವಿಸಿದ ನೋವು ನಲಿವುಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಡಾ.ಎನ್.ವಿ. ಧೂಳಖೇಡ ಮತ್ತಿತರರು ಮಾತನಾಡಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜಯಕ್ಕ ಕಳ್ಳಿ, ಪೂಜಾ ಖರಾಟೆ, ಮಹೇಶ ಹೊಗೆಸೊಪ್ಪಿನ ಇದ್ದರು. ಇದೇ ಸಂದರ್ಭದಲ್ಲಿ ಎಸ್.ಎಫ್. ಆದಿ ಅವರು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ನಂತರ ಆದಿ ಗುರುಗಳನ್ನು ಅವರ ನೂರಾರು ಶಿಷ್ಯರು ಸನ್ಮಾನಿಸಿ ಅಭಿನಂದಿಸಿದರು.