ಗ್ಯಾಸ್ ಗೀಸರ್ ಸೋರಿಕೆ ಯುವಕ-ಯುವತಿ ಸಾವು

ಬೆಂಗಳೂರು,ಜೂ.೧೨- ಸ್ನಾನಕ್ಕೆ ಒಟ್ಟಿಗೆ ಹೋಗಿದ್ದಾಗ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವಕ-ಯುವತಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ.ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್‌ನ ಸುಧಾರಾಣಿ ಮೃತ ದುರ್ವೈವಿಗಳು. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಈ ಜೋಡಿ ದುರಂತ ಅಂತ್ಯ ಕಂಡಿದೆ.ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಜೂನ್ ೧೦ರಂದು ಸಂಜೆ ಸುಧಾರಾಣಿ ಆಗಮಿಸಿದ್ದಳು. ರಾತ್ರಿ ಸ್ನಾನಕ್ಕೆ ಗ್ಯಾಸ್ ಗೀಸರ್ ಆನ್ ಮಾಡಿ ಬಾತ್‌ರೂಮ್‌ಗೆ ಹೋಗಿದ್ದಾರೆ. ದುರದೃಷ್ಟವಶಾತ್ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.ಎರಡು ದಿನಗಳು ಕಳೆದರೂ ಮನೆಯಿಂದ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡು ಇಂದು ಬೆಳಗ್ಗೆ ಮನೆ ಮಾಲೀಕ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ ಇಬ್ಬರು ಮದುವೆಯಾಗಲು ತಯಾರಿಯಾಗಿದ್ದರು. ಆದರೆ, ಹೊಸ ಜೀವನ ಆರಂಭಿಸಬೇಕೆನ್ನುವಷ್ಟರಲ್ಲೇ ವಿಧಿ ಬಿಟ್ಟಿಲ್ಲ. ಮದುವೆಗೆ ಮುಂಚೆಯೇ ಜೋಡಿ ಮಸಣ ಸೇರಿರುವುದು ದುರಂತವೇ ಸರಿ.