ಗ್ಯಾರಂಟಿ ಬದಲು, ಭೂಮಿ ಕೊಡಿ: ವೆಂಕಟಗಿರಿಯಯ್ಯ

ಮಂಡ್ಯ: ಜೂ.10:- ಜನತೆಗೆ ಗ್ಯಾರಂಟಿಗಳನ್ನು ಕೊಡುವ ಬದಲು ಬದುಕಿಗಾಗಿ ಭೂಮಿ ಕೊಡಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ನಡೆದ ದಲಿತ ಚಳವಳಿ ನಾಯಕ ಪೆÇ್ರ.ಬಿ. ಕೃಷ್ಣಪ್ಪ ರವರ 86ನೇ ಜನ್ಮದಿನೋತ್ಸವ ಮತ್ತು ಸಮತೆಯ ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ ಉದ್ಘಾಟಿಸಿ ಅವರ ಮಾತನಾಡಿದರು.
ರಾಜ್ಯದಲ್ಲಿ ದುರಾಡಳಿತ ನಡೆಸಿದ್ದ ಕೋಮುವಾದಿ ಸರ್ಕಾರ ತೊಲಗಿ ಮುಖವಾಡದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಇದೀಗ ಕಾಂಗ್ರೆಸ್ ಸರ್ಕಾರ ಜನತೆಗೆ ಮೋಸ ಮಾಡುವ ಮುಖವಾಡ ಧರಿಸಿದೆ, ಬೆಳೆ ಬೆಳೆಯುವ ಭೂಮಿ, ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಉಚಿತವಾಗಿ ನೀಡಲು ಮುಂದಾಗಬೇಕಾಗಿದೆ,ಆದರೆ ಇದನ್ನೆಲ್ಲ ಸರ್ಕಾರ ಮರೆತಿದೆ ಎಂದರು.
ಅಂಬೇಡ್ಕರ್ ಕಾನೂನು ಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಆಸ್ತಿ ಹಕ್ಕು ಕಲ್ಪಿಸುವ ಹಿಂದೂ ಕೋಡ್ ಜಾರಿಗೆ ತರಲು ಮುಂದಾದಾಗ ಕಾಂಗ್ರೆಸ್ ನ ಜವಹರ ಲಾಲ್ ನೆಹರೂ ವಿರೋಧ ಮಾಡಿದ್ದರಿಂದ ಜಾರಿ ಸಾಧ್ಯವಾಗಲಿಲ್ಲ, ಹಾಗೊಮ್ಮೆ ಅಷ್ಟು ವರ್ಷಗಳ ಹಿಂದೆ ಆಸ್ತಿ ಹಕ್ಕು ದೊರೆತಿದ್ದರೆ ಮಹಿಳೆಯರು 2000 ಹಣ, ಬಸ್ ಪಾಸ್ ಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ, ಆದರೂ ಕೂಡ ರಾಜಕೀಯ ಪಕ್ಷ ಮತ್ತು ನಾಯಕರ ಮನಸ್ಥಿತಿಯಿಂದ ರಾಜ್ಯದಲ್ಲಿ ಇದುವರೆಗೆ ಮಹಿಳೆಯರು ಮತ್ತು ಅಸ್ಪೃಶ್ಯ ಸಮುದಾಯದ ಜನತೆ ಮುಖ್ಯಮಂತ್ರಿ ಯಾಗಲು ಸಾಧ್ಯವಾಗಿಲ್ಲ, ಸಂವಿಧಾನ ಜಾರಿಗಾಗಿ ಶೋಷಿತ ಜನತೆ ಹೋರಾಟ ಮಾಡಿದ್ದ ಪರಿಣಾಮ ಸವಲತ್ತುಗಳನ್ನು ಪಡೆದಿದ್ದೇವೆ, ಇದರ ಹೊರತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರ ಕೊಟ್ಟಿದ್ದಲ್ಲ ಎಂದರು.
ದೇಶದಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಮೀಸಲಾತಿ ಇರಬೇಕು ಎಂದು ಯಾವುದೇ ಕಾನೂನು ನಿಗದಿ ಮಾಡಿಲ್ಲ, ಆದರೆ ಸುಪ್ರೀಂ ಕೋರ್ಟ್ ಶೇ.50 ರಷ್ಟು ಪ್ರಮಾಣ ಮೀರುವಂತಿಲ್ಲ ಎಂದು ತೀರ್ಪು ನೀಡಿದೆ, ಇದನ್ನು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪ್ರಶ್ನಿಸಲಿಲ್ಲ, ಅಥವಾ ಕಾನೂನು ತಿದ್ದುಪಡಿ ಮೂಲಕ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ವಹಿಸಲಿಲ್ಲ ಎಂದು ದೂರಿದರು.
ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡಿ ಅಧಿಕಾರಕ್ಕೆ ಬಂದಿರುವುದು ಅಕ್ರಮ ಸರ್ಕಾರ, ನ್ಯಾಯಯುತ ಚುನಾವಣೆ ನಡೆದಿಲ್ಲ, ಅಕ್ರಮದ ಮೂಲಕ ಗೆಲುವು ಸಾಧಿಸಿದೆ, ಅದಕ್ಕೆ ಆಳುವ ಸರ್ಕಾರಗಳು ಅಕ್ರಮ ಸರ್ಕಾರಗಳು ಎಂದು ಹೇಳಬಹುದಾಗಿದೆ ಎಂದರು.
ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಾರೆ, ಸಂವಿಧಾನ ವಿರೋಧಿ ನಡೆ ದೇಶದ್ರೋಹದ ಕೃತ್ಯ,ಆದರೆ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ದೇಶದಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ತಲೆದೂರಿದೆ ಎಂದರು.
ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಹೆಣ್ಣುಮಕ್ಕಳ ಬೆತ್ತಲೆ ಸೇವೆಯನ್ನು ತಡೆದು ಹೆಣ್ಣಿನ ಮಾನ ರಕ್ಷಣೆ ಮಾಡಿದ ರಕ್ಷಕ ಪೆÇ್ರ. ಬಿ ಕೃಷ್ಣಪ್ಪ, ಅಷ್ಟೇ ಅಲ್ಲದೆ ದೇವದಾಸಿ ಪದ್ಧತಿ ವಿರುದ್ಧ ಸಿಡಿದ ಗಂಡು ಎಂದು ಬಣ್ಣಿಸಿದ ಅವರು ಬುಲೆಟ್ ಅಲ್ಲ, ಬ್ಯಾಲೆಟ್ ಎಂಬುದು ದಲಿತ ಚಳವಳಿಯ ದಯೋದ್ದೇಶವಾಗಿತ್ತು, ಅದರಂತೆ ಅಂಬೇಡ್ಕರ್ ಆಶಯದಂತೆ ಮುನ್ನಡೆದು, ಸ್ವತಂತ್ರ ರಾಜಕಾರಣದ ಕಡೆ ದಲಿತರು ಸಾಗಬೇಕೆಂದು ಹೇಳಿದರು.