ಹುಬ್ಬಳ್ಳಿ, ಜೂ21: ಗ್ಯಾರಂಟಿ ವಿಷಯದಲ್ಲಿ ದಿನಕ್ಕೊಂದು ಷರತ್ತು ಹಾಕುವ ಮೂಲಕ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯ ಪ್ರಸ್ತಾಪಿಸುತ್ತ ಭಾರತ ಸರ್ಕಾರ ಇಡೀ ದೇಶದಲ್ಲಿ ಐದು ಕೆ.ಜಿ. ಅಕ್ಕಿ ಕೊಡುವಂತೆ ಕರ್ನಾಟಕದಲ್ಲೂ ಕೊಡುತ್ತಿದೆ. ಇದು ಸಿದ್ಧರಾಮಯ್ಯನವರ ಅಕ್ಕಿ ಅಲ್ಲ ಎಂದು ಚಾಟಿ ಬೀಸಿದರು.
ಜನರಿಂದ ಮತ ಕೇಳುವಾಗ ಹತ್ತು ಕೆ.ಜಿ.ಅಕ್ಕಿ ಕೊಡುವುದಾಗಿ ಹೇಳಿದ್ದವರೇ ಈಗ ಅದನ್ನು ಕೊಡಲಿ ಎಂದ ಅವರು, ಭಾರತ ಸರ್ಕಾರ ಕೊಟ್ಟರೆ ನಾವು ಕೊಡುತ್ತೇವೆ ಎಂದು ಕಾಂಗ್ರೆಸ್ನವರು ಹೇಳಿದ್ದರಾ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಸೇರಿ ಎಲ್ಲರೂ ಮನಸಿಗೆ ಬಂದಂತೆ ಅಕ್ಕಿ ಕೇಳುತ್ತಿದ್ದಾರೆ ಕೇಳಿದಂತೆ ಕೊಡಲಾಗುತ್ತದೆಯೇ? ಎಂದ ಅವರು, ಇಂತಿಷ್ಟು ಅಕ್ಕಿ ಸಂಗ್ರಹದಲ್ಲಿರಬೇಕೆಂಬ ನಿಯಮವಿದೆ, ಅದು ಇರಬೇಕು, ಕೇಂದ್ರದ ಗೊಡೌನ ಖಾಲಿ ಆದರೆ ಆಹಾರ ಭದ್ರತೆ ಪ್ರಶ್ನೆ ಬರುತ್ತದೆ ಎಂಬುದು ಇವರಿಗೆ ಗೊತ್ತೇ? ಎಂದು ಖಾರವಾಗಿಯೇ ಕೇಳಿದರು.
ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಬಳಕೆಯಾಗುವ ಸರ್ವರ್ ನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡುತ್ತಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಇದೊಂದು ಅತ್ಯಂತ ಹಾಸ್ಯಾಸ್ಪದ ಹೇಳಿಕೆಯಾಗಿದೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ಸಚಿವರು ಯೋಚಿಸಬೇಕಾಗಿತ್ತು, ಸಚಿವ ಜಾರಕಿಹೊಳಿಯವರು ಸರ್ವರ್ ಹ್ಯಾಕ್ ಆಗಿದೆ ಎಂಬ ಹೇಳಿಕೆ ಸಂದರ್ಭದಲ್ಲಿ ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಿದ ಮಾದರಿಯಲ್ಲಿ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂದಿದ್ದಾರೆ ಅದೇ ಇವಿಎಂ ಯಂತ್ರಗಳ ಸಹಾಯದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅವರು ಮರೆತಂತಿದೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ವಿರುದ್ಧ ಪೆÇೀಸ್ಟ್ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಬಗ್ಗೆ ಪ್ರತಿಕ್ರಿಯಿಸುತ್ತ, ಅದೇ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಹಾಕುವಾಗ ಇದು ನೆನಪಾಗಲಿಲ್ಲವೇ ಮುಖ್ಯಮಂತ್ರಿಯವರೇ,? ಎಂದು ಪ್ರಶ್ನಿಸಿದ ಅವರು, ಸರ್ವಾಧಿಕಾರ ಧೋರಣೆ ಸರಿಯಲ್ಲ ಜನರು ನಿಮಗೆ ಅಧಿಕಾರ ನೀಡಿದ್ದು ವಿನಮ್ರತೆಯಿಂದ ಆಡಳಿತ ನಡೆಸಲು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಎಂದು ಹೇಳಿದರು.
ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಸದ್ಯ ಬಸ್ಗಳಲ್ಲಿ ಪುರುಷ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ, ಓವರ್ ಲೋಡ್ನಿಂದ ಅಪಘಾತಗಳು ಸಂಭವಿಸುತ್ತಿವೆ, ಕಾಂಗ್ರೆಸ್ ಸರ್ಕಾರ ಹೊಸ ಬಸ್ಗಳನ್ನು ಖರೀದಿ ಮಾಡಲಿ ಎಂದು ಜೋಶಿ ನುಡಿದರು.
ಹೋಲಿಕೆ ಸರಿಯಲ್ಲ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿಯ ತಳಮಟ್ಟದ ಕಾರ್ಯಕರ್ತರು, ಅವರೇನೂ ಕಾಂಗ್ರೆಸ್ಗೆ ಹೋಗುವುದಿಲ್ಲ ಬಿಜೆಪಿ ನಾಯಕರಾಗಿಯೇ ಮುಂದುವರಿಯುತ್ತಾರೆ ಎಂದ ಅವರು, ಜಗದೀಶ ಶೆಟ್ಟರ್ ಅವರಿಗೂ ಮುನೇನಕೊಪ್ಪರಿಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.