ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಹಿನ್ನೆಲೆ ತಹಶೀಲ್ದಾರ್ ಸಭೆ

ಸಂಜೆವಾಣಿ ವಾರ್ತೆ

 ಹಿರಿಯೂರು : ಜು .22-ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 19ರಿಂದ ತಾಲ್ಲೂಕಿನಾದ್ಯಂತ ಪ್ರಾರಂಭವಾಗಿದ್ದು , ಈ ಸಂಬಂಧ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ತಹಶೀಲ್ದಾರ್‌ ಪ್ರಶಾಂತ್ ಕೆ ಪಾಟೀಲ್  ತಿಳಿಸಿದರು.  ಕಸಬಾ ಹೋಬಳಿ ನೋಡಲ್‌ ಅಧಿಕಾರಿಯಾಗಿ ರೇಷ್ಮೆ ಇಲಾಖೆ  ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ  ಧರಂಪುರ ಹೋಬಳಿ- ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಉಲ್ಫೆಕ್  ಜೈಬ , ಐಮಂಗಳ  ಹೋಬಳಿ- ಸಮಾಜ ಕಲ್ಯಾಣ ಅಧಿಕಾರಿ ದಿನೇಶ್, ಜೆಜೆ ಹಳ್ಳಿ  ಹೋಬಳಿಗೆ ಹಿಂದುಳಿದ ಅಧಿಕಾರಿ  ಚಿತ್ರ ಲಿಂಗಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಒಂದು ಸಾವಿರ ಫಲಾನುಭವಿಗಳಿಗೆ ಇಬ್ಬರು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತದೆ. ಒಂದು ಕೇಂದ್ರದಲ್ಲಿ ದಿನಕ್ಕೆ 50 ಮಂದಿ ಮಾತ್ರ ತಮ್ಮ ಹೆಸರು ನೋದಾಯಿಸಿಕೊಳ್ಳಲು ಅವಕಾಶ ಇರುತ್ತದೆ ಎಂದು ಅವರು ಹೇಳಿದರು. ಹಿರಿಯೂರು ತಾಲೂಕಿನಲ್ಲಿ ಒಟ್ಟು 72 ಕೇಂದ್ರಗಳಿದ್ದು ಇದರ ಪೈಕಿ ಗ್ರಾಮ @ ಒನ್  38 ಕೇಂದ್ರಗಳು ಮತ್ತು ಬಾಪೂಜಿ  ಕೇಂದ್ರ  33 ಹಾಗೂ ನಗರದಲ್ಲಿ ಕರ್ನಾಟಕ ಒನ್@01 ಕೇಂದ್ರದಲ್ಲಿ ಈ ಸೇವೆಯನ್ನು ಈಗಾಗಲೇ ಪ್ರಾರಂಭಿಸಿದೆ. ತಾಲೂಕಿನ  ಮಹಿಳಾ ಮತ್ತು ಕಲ್ಯಾಣ ಇಲಾಖೆ ಪ್ರಬಾರ ಅಧಿಕಾರಿ ರಾಘವೇಂದ್ರ  ಮಾತನಾಡಿ, ‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ಹೆಸರು ನಮೂದಿಸಿರುವ ಮಹಿಳೆ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅಂಥವರು ಗ್ರಾಮ- ಒನ್‌, ಕರ್ನಾಟಕ- ಒನ್‌ ಮತ್ತು ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ತಮ್ಮ ಹೆಸರು ನೊಂದಾಯಿಸಬೇಕು. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವವರಿಗೆ ಅವಕಾಶ ಇರುವುದಿಲ್ಲ. ಫಲಾನುಭವಿಯು ಆಧಾರ್‌ ಚೀಟಿಗೆ ತಮ್ಮ ಮೊಬೈಲ್‌ ಸಂಖ್ಯೆಯನ್ನು ಜೋಡಿಸಿರಬೇಕು’ ಎಂದು ವಿವರಿಸಿದರು.ಅಧಿಕಾರಿ ವರ್ಗದವರು ಸಭೆಯಲ್ಲಿ ಪಾಲ್ಗೊಂಡಿದ್ದರು.