ಆಲಮಟ್ಟಿ:ಜೂ.10: ಮುಂಗಾರು ಮಳೆ ಮುನಿಸಿಕೊಂಡಂತಾಗಿದೆ. ಭೂವೋಡಲು ಬಿಸಿಲಿನ ಝಳಕ್ಕೆ ಕಾಯ್ದ ಬೆಂಕಿಯ ಕೆಂಡಂತಾಗಿದೆ.ಜನ,ಜಾನುವಾರು ಮೂಕ ಜೀವಗಳ ಕಂಗಳು ಇದೀಗ ಬಾನಂಗಳದತ್ತ ನೆಟ್ಟಿವೆ.ಆಕಾಶದಲ್ಲಿ ಚಲಿಸುವ ಕಪ್ಪ ಮೋಡಗಳ ಸಂಚಲನದಿಂದ ಮಳೆ ಧರೆಗಿಳಿಯಬಹುದೆಂಬ ನಿರೀಕ್ಷಿತ ಆಶಾಭಾವ ಹುಸಿಯಾಗುತ್ತಲ್ಲಿದೆ. ಕೃಷ್ಣೆಯ ತೀರದಲ್ಲಿ ಮಳೆಗಾಗಿ ತಪಜಪ ಆರಂಭಗೊಂಡಿದೆ. ಜನ ಜೀವಜಲದ ಹನಿಗಾಗಿ ಪೂಜೆ,ಪುರಸ್ಕಾರ ಇನ್ನಿಲ್ಲದ ಕಸರತ್ತಿಕ್ಕಿಳಿದಿದ್ದಾರೆ. ಮೇಘ ವೃಷ್ಟಿ ಬೇಗ ಸೃಷ್ಟಿವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಲ್ಲಿದ್ದಾರೆ.ಮಳೆಗಾಗಿ ಗುರ್ಜಿ ಪೂಜೆ ಶುರುವಾಗಿದೆ. ಜನಪದ ಹಾಡಿನ ಸದ್ದು ಮೊಳಗುತ್ತಲ್ಲಿದೆ. ಕೃಷ್ಣೆಯ ತಟದಲ್ಲಿರುವ ಅರಳದಿನ್ನಿ ಗ್ರಾಮದಲ್ಲಿ ಇಂಥದೊಂದು ವಿಶೇಷ ದೃಶ್ಯ ಗುರುವಾರ ಕಂಡುಬಂತು.
ಆಲಮಟ್ಟಿಗೆ ಸಮೀಪದ ಅರಳದಿನ್ನಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮ ಪಂಚಾಯ್ತಿ ಸದಸ್ಯೆ ಚಂದ್ರವ್ವ ಧರ್ಮರ ಗುರ್ಜಿ ಹೊತ್ತು ಮನೆ ಮನೆ ಸಂಚರಿಸಿ ಗುರುವಾರ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಗುರ್ಜಿಯಾಗಲು ಎಲ್ಲರೂ ಹಿಂದೇಟು ಹಾಕಿದಾಗ, ಸ್ವತಃ ಗ್ರಾಮ ಪಂಚಾಯ್ತಿ ಸದಸ್ಯೆ ಚಂದ್ರವ್ವ ಧರ್ಮರ ಮುಂದೆ ಬಂದು ಗುರ್ಜಿ ಇಟ್ಟು ಪೂಜಿಸಿದ್ದು ವಿಶೇಷ.
ರೊಟ್ಟಿಯ ಹಂಚು ಡಬ್ಬು ಹಾಕಿ, ಅದರಲ್ಲಿ ಅರಲು (ಕಲಿಸಿದ ಹಳ್ಳದ, ನದಿಯ ಜಿಗುಟಾದ ಮಣ್ಣು) ತಂದು ಉಂಡೆ ಆಕಾರದಲ್ಲಿ ಗುರ್ಜಿ ರೂಪಿಸಲಾಗುತ್ತದೆ. ಅದಕ್ಕೆ ಹುಲ್ಲು ಸಿಗಸಲಾಗುತ್ತದೆ. ಈ ಹಂಚನ್ನು ಗುರ್ಜಿಯಾದವರು ತಲೆ ಮೇಲೆ ಹೊತ್ತುಕೊಂಡು ಮನೆ ಮನೆ ಸಂಚರಿಸುತ್ತಾರೆ.
ಪ್ರತಿ ಮನೆಗೆ ಹೋದಾಗ, ಮನೆಯವರು ಮನೆಯಲ್ಲಿನ ನೀರನ್ನು ಗುರ್ಜಿಯ ತಲೆಯ ಮೇಲೆ ಹಾಕುತ್ತಾರೆ. ನೀರು ಹಾಕುವಾಗ ಪ್ರದಕ್ಷಿಣೆ ಹಾಕುವಾಗ, ಅಲ್ಲಿ ಸೇರಿರುವ ಮಹಿಳೆಯರು ಗುರ್ಜಿ ಹಾಡು ಹಾಡಿದರು.
“ಗುರ್ಜಿ, ಗೊರಜಿ ಎಲ್ಲಾಡಿ ಬಂದೇ, ಹಳ್ಳ-ಕೊಳ್ಳ ತೇಲಾಡಿ ಬಂದೇ, ಬಾರ ಮಳೆಯೇ, ಕಪಾಟ ಮಳೆಯೇ, ಸುಣ್ಣ ಕೊಡತೀನಿ ಸುರಿಯೋ ಮಳೆಯೋ ಬಣ್ಣ ಕೊಡತಿನಿ ಸುರಿ ಮಳೆಯೇ, ಸುರಿ ಮಳೆಯೇ…” ಎಂದು ಹಾಡ ಹಾಡಿದರು.
ಪ್ರತಿ ಮನೆಯವರು ನೀರು ಹಾಕುವುದರ ಜತೆ ಅಕ್ಕಿ, ಬೆಲ್ಲ, ದವಸ ಧಾನ್ಯಗಳನ್ನು ನೀಡುತ್ತಾರೆ. ಇದರಿಂದ ರಾತ್ರಿ ಅಡುಗೆ ತಯಾರಿಸಿ ಊರ ದೇವರಿಗೆ ನೇವೇದ್ಯೆ ತೋರಿಸಿ ಕೆಲ ಜನರಿಗೆ ಊಟ ಹಾಕಲಾಗುತ್ತದೆ. ಇದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇವರದ್ದು.
ಅವರೊಂದಿಗೆ ರೇಣುಕಾ ಡಮನಾಳ, ಯಲ್ಲವ್ವ ಮಾದರ, ಲಲಿತಾ ಜಾಧವ, ಮುದಕವ್ವ ಘಟ್ನೂರ, ಶಿವಲಿಂಗವ್ವ ಭಾವಿಕಟ್ಟಿ ಮತ್ತೀತರರು ಇದ್ದರು.