
ಭಾಲ್ಕಿ:ಎ.2:ಇತ್ತೀಚಿನ ದಿನಗಳಲ್ಲಿ ಭಕ್ತರಲ್ಲಿ, ವಿದ್ಯಾರ್ಥಿಗಳಲ್ಲಿ ಗುರುಭಕ್ತಿ, ಗುರುನಿಷ್ಠೆ ಕಣ್ಮರೆಯಾಗುತ್ತಿದೆ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಅಪಾರ ಗುರುನಿಷ್ಠೆ, ಭಕ್ತಿಯನ್ನು ಹೊಂದಿ ಜಿಲ್ಲೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ದಾಸೋಹ ವ್ಯವಸ್ಥೆ ಕಲ್ಪನೆಗೆ ಮೀರಿದ್ದು. ಸಿದ್ಧಗಂಗಾ ಶ್ರೀಗಳ ಹಸ್ತದಿಂದ ಭಾಲ್ಕಿ ಮಠಕ್ಕೆ ಸಿದ್ಧಗಂಗಾ ಪ್ರಶಸ್ತಿ ಸಿಕ್ಕಿರುವುದು ಹರ್ಷದ ಸಂಗತಿ.
ಸಿದ್ಧಗಂಗಾ ಶ್ರೀ 111 ವರ್ಷ ಬದುಕಿ ಸಮಾಜವನ್ನು ಬೆಳಗಿದ್ದರು ಎಂದು ತಿಳಿಸಿದರು.
ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿನ ಅದಮ್ಯ ಸಾಧನೆಗೆ ಮಠಗಳೇ ಕಾರಣ. ಶಿಕ್ಷಣ, ದಾಸೋಹ, ಸೇವೆಗೆ ಮತ್ತೊಂದು ಹೆಸರು ಸಿದ್ಧಗಂಗಾ ಮಠ.
ಬಸವಣ್ಣನವರ ಕಾಯಕ, ದಾಸೋಹ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದವರು ಸಿದ್ಧಗಂಗಾ ಶ್ರೀ. ಸಿದ್ಧಗಂಗಾ ಮಠದ ಬಗ್ಗೆ ನಿಷ್ಠೆ, ಶ್ರದ್ಧೆ, ಭಕ್ತಿ ಇಟ್ಟುಕೊಂಡಿರುವ ಹಳೇ ವಿದ್ಯಾರ್ಥಿಗಳ ಕಾರ್ಯ ಅನುಪಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಾಯಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಮಾತನಾಡಿ, ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು ಎಂದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಸಿದ್ಧಗಂಗಾ ಶ್ರೀ ಕಾರ್ಯ, ಬದುಕು ನಾಡಿನ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ, ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರಮುಖ ಈಶ್ವರ ರುಮ್ಮಾ, ಪತ್ರಕರ್ತ ದೀಪಕ ಠಮಕೆ, ಬಸವರಾಜ್ ಪ್ರಭಾ ಅವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಪಿಡಿಒ ಚಂದ್ರಶೇಖರ ಬನ್ನಾಳೆ, ಪ್ರಮುಖರಾದ ಕಾಶಿನಾಥ ಭೂರೆ, ಮಲ್ಲಿಕಾರ್ಜುನ ಮಣಿಗೇರೆ, ಗ್ರಾಮ
ಪಂಚಾಯಿತಿ ಸದಸ್ಯ ಏಕನಾಥ ಮೇತ್ರೆ, ಪ್ರಮುಖರಾದ ಸಂತೋಷ ಪಾಟೀಲ, ಸೋಮನಾಥ ತುಗಶೆಟ್ಟೆ, ಸಿದ್ದು ತುಗಶೆಟ್ಟೆ, ನೀಲಕಂಠ ಬಿರಾದಾರ ಸೇರಿದಂತೆ ಇತರರು ಇದ್ದರು.
ದೀಪಕ ಠಮಕೆ ನಿರೂಪಿಸಿ. ಸಂಜೀವಕುಮಾರ ಜಮಾದಾರ ವಂದಿಸಿದರು.