
ಕೋಲಾರ,ಆ,೧೮:ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಗುರಿ ಸಾಧನೆಗೆ ಕಲಿಕೆಯ ಹಸಿವು, ಛಲ, ಸತತ ಪರಿಶ್ರಮ, ಶ್ರದ್ಧೆ ಅಗತ್ಯವಾಗಿದ್ದು, ಸಂಕಲ್ಪದೊಂದಿಗೆ ಅಭ್ಯಾಸ ಮುಂದುವರೆಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ಕಿವಿಮಾತು ಹೇಳಿದರು.
ಬುಧವಾರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸ್ಟಡೀ ಸರ್ಕಲ್ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿತವಾಗಿರುವ ಹಲವು ಹುದ್ದೆಗಳ ಆಯ್ಕೆಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತಯಾರಿಗಾಗಿ ನಡೆಸಲಾದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧನೆಗೆ ದೈನಂದಿನ ವೃತ್ತಪತ್ರಿಕೆಗಳಲ್ಲಿ ಸಿಗುವ ಸಾಮಾನ್ಯ ಜ್ಞಾನ ನಿಮ್ಮದಾಗಿಸಿಕೊಳ್ಳಿ, ನಿಗಧಿತ ಪಠ್ಯವಸ್ತುವಿನ ಅಧ್ಯಯನ ಮಾಡಿ, ನಿರಂತರ ಓದು ಇಂತಹ ದೊಡ್ಡಮಟ್ಟದ ಸಾಧನೆಗೆ ಅಗತ್ಯವಿದ್ದು, ಅಂತಹವರು ಮಾತ್ರವೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಕೆಎಎಸ್ ಅಧಿಕಾರಿಗಳ ತವರಾಗಿತ್ತು, ಇತ್ತೀಚಿನ ದಿನಗಳಲ್ಲಿ ಆ ಪ್ರಮಾಣ ಕಡಿಮೆಯಾಗುತ್ತಿದ್ದು, ಇಂದಿನ ವಿದ್ಯಾರ್ಥಿ ಸಮುದಾಯ ಮತ್ತೆ ಕೋಲಾರದ ಹಿರಿಮೆ ಎತ್ತಿಹಿಡಿಯಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸಬೇಕು ಎಂದು ಕೋರಿದರು.
ಸಹಾಯಕ ಉದ್ಯೋಗಾಧಿಕಾರಿ ಮುನಿಕೃಷ್ಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಧಿಸೂಚಿತವಾಗಿರುವ ವಿವಿಧ ಹುದ್ದೆಗಳ ಬಗ್ಗೆ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿ, ಒಟ್ಟು ೧೦ ದಿನಗಳ ಕಾಲ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾವುದೇ ಆಭ್ಯರ್ಥಿಗಳು ಗೈರು ಹಾಜರಾಗದೆ ಇರಲು ಅದೇಶಿಸಿದರು .
ಸದರಿ ಪರೀಕ್ಷಾ ತರಬೇತಿಗೆ ಅಧ್ಯಯನ ಮಾಡಬೇಕಾದ ಪುಸ್ತಕಗಳ ಬಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೊಹಮ್ಮದ್ ಇಲಿಯಾಸ್, ನಾಗೇಶ್ ಹಾಗೂ ವಿನೋದ್ ರವರು ಪರೀಕ್ಷಾ ಪೂರ್ವ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು, ಪಠ್ಯಕ್ರಮ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿ ವರ್ಗದವರಾದ ಮನೋಜ್, ತಿಮ್ಮರಾಜು, ಹೀನಾ, ಶ್ವೇತಾ ಹಾಗೂ ಈಶ್ವರ್ ಪಾಲ್ಗೊಂಡಿದ್ದರು.