ಗುಣಮಟ್ಟದ ಹಾಲು ಪೊರೈಕೆಯಿಂದ ಹೆಚ್ಚಿನ ಲಾಭ: ಎಚ್.ಎಸ್.ಬಸವರಾಜು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 05- ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಗುಣಮಟ್ಟದ ಹಾಲು ಪೊರೈಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ಜೊತೆಗೆ ರೈತರ ಸಂಸ್ಥೆಯಾಗಿರುವ ಒಕ್ಕೂಟವನ್ನು ಅಭಿವೃದ್ದಿಪಡಿಸಿದ ಕೀರ್ತಿ ನಿಮ್ಮದಾಗುತ್ತದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.
ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಸಲವಾಡಿ ಡೇರಿ 1979 ರಲ್ಲಿ ಆರಂಭವಾಗಿರುವ ಬಹಳ ಹಳೆಯ ಡೇರಿಯಾಗಿದೆ. ತಮಿಳುನಾಡು ಗಡಿಯಲ್ಲಿರುವ ಬಿಸಲವಾಡಿ ಡೇರಿಯು ಈ ಭಾಗದ ರೈತರ ಜೀವನಾಡಿಯಾಗಿದೆ. ಉತ್ತಮ ವ್ಯಾಪಾರ ವಹಿವಾಟು ಮಾಡಿ 6.10 ಲಕ್ಷ ರೂ. ನಿವ್ವಳ ಲಾಭ ಪಡೆದುಕೊಂಡಿದೆ. ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿದೆ. ಇಂಥ ಡೇರಿಗಳಿಂದ ಗ್ರಾಮದ ಅಭಿವೃದ್ದಿಯಾಗುತ್ತದೆ. ಪ್ರತಿ ವಾರ ರೈತರ ಖಾತೆಗೆ ಹಣ ಜಮಾವಾಗುತ್ತದೆ. ಹೀಗಾಗಿ ಖಾಸಗಿ ಡೇರಿಗಳ ವ್ಯಾಮೋಹವನ್ನು ಬಿಟ್ಟು ರೈತರು ನಂದಿನಿ ಡೇರಿಗೆ ಹಾಲು ಪೊರೈಕೆ ಮಾಡಬೇಕೆಂದು ತಿಳಿಸಿದರು.
ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಹೆಚ್ಚು ಹಾಲು ಪೊರೈಕೆ ಮಾಡಿದ 22 ಮಂದಿ ಸದಸ್ಯರಿಗೆ ಬಹುಮಾನವಾಗಿ ಹಾಲಿನ ಕ್ಯಾನ್, ಕುಕ್ಕರ್, ಸ್ಟೌವ್ ವಿತರಣೆ ಮಾಡಿ ಮಾತನಾಡಿ, ಚಾಮುಲ್ ರೈತರ ಪ್ರಗತಿಗಾಗಿ ಸ್ಥಾಪನೆಯಾಗಿರುವ ಸಂಸ್ಥೆಯಾಗಿದ್ದು, ಕುದೇರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲಿನ ಸಂಗ್ರಹಣ ಘಟಕ, ಟೆಟ್ರಾ ಪ್ಯಾಕೇಟ್ ಯುನಿಟ್, ಇತರೇ ನಂದಿನಿ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಗುಣಮಟ್ಟ ಕಡಿಮೆಯಾಗಿರುವ ಕಾರಣದಿಂದ ಒಕ್ಕೂಟದಿಂದ ಲಾಭಾಂಶ ಕಡಿಮೆ ಬಂದಿದೆ. ಇದನ್ನು ಮನಗಂಡು ರೈತರು ಒಕ್ಕೂಟ ಅಧಿಕಾರಿಗಳು ಹಾಗೂ ಪಶು ತಜ್ಞರ ಸಲಹೆ ಸೂಚನೆಗಳನ್ನು ಪಾಲನೆ ಹಸು ಸಾಕಾಣಿಕೆ ಮಾಡಿದರೆ ಇನ್ನು ಹೆಚ್ಚಿನ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು.
ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ. ಎನ್. ಅಮರ್ ಮಾತನಾಡಿ, ರಾಸುಗಳ ನಿರ್ವಹಣೆ ಹಾಗೂ ಹಾಲಿನಲ್ಲಿ ಜೆಡ್ಡು, ಪ್ಯಾಡ್ ಅಂಶಗಳನ್ನು ಹೆಚ್ಚಿಸುವ ಕುರಿತು ಮಾಹಿತಿಗಳನ್ನು ನೀಡಿದರು. ವೈಜ್ಞಾನಿಕ ಮಾದರಿಯಲ್ಲಿ ಹಸುಗಳನ್ನು ಸಾಕುವ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಪ್ರತಿ ವರ್ಷದ ಹಸು ಕರು ಹಾಕುವಂತೆ ಮಾಡುವ ಜಾಣ್ಮೆ ಮತ್ತು ಶಕ್ತಿ ನಿಮ್ಮಲ್ಲಿದೆ. ಹೀಗಾಗಿ ಪ್ರತಿಯೊಬ್ಬರು ಡೇರಿ ಮತ್ತು ಒಕ್ಕೂಟದಿಂದ ದೊರೆಯುವ ಸಲವತ್ತು ಪಡೆದುಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸಕ್ತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ, 18 ಲಕ್ಷ ವ್ಯಾಪಾರ ಲಾಭ ಪಡೆದುಕೊಂಡಿದೆ. 6.10 ಲಕ್ಷ ರೂ. ನಿವ್ವಳ ಪಡೆದುಕೊಂಡಿದೆ. ಹಾಲು ಉತ್ಪಾದಕರ ರೈತರಿಗೆ 2.75 ಲಕ್ಷ ರೂ. ಬೋನಸ್ ವಿತರಣೆ ಮಾಡಲಾಗುವುದು ಎಂದರು.
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮಹೇಶ್ ವಾರ್ಷಿಕ ವರದಿಯನ್ನು ಓದಿ ಅನುಮತಿ ಪಡೆದುಕೊಂಡರು. ವೇದಿಕೆಯಲ್ಲಿ ಚಾಮುಲ್ ವಿಸ್ತರಣಾಧಿಕಾರಿ ಭಾಗ್ಯರಾಜು, ಸಂಘದ ಉಪಾಧ್ಯಕ್ಷ ಶೆಟ್ಟಯ್ಯ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಹದೇವಯ್ಯ, ಸಂಘದ ನಿರ್ದೇಶಕರಾದ ಸದಾಶಿವ, ಎಸ್. ಗುರುಮಲ್ಲಪ್ಪ, ಬಸವಣ್ಣ, ನಾಗೇಶ್, ಮಹದೇವಸ್ವಾಮಿ, ಲಿಂಗಣ್ಣ, ಕುಮಾರ್, ನಿಂಗನಾಯಕ, ಗೌರಮ್ಮ, ರತ್ನಮ್ಮಕೆಂಪಣ್ಣ, ರತ್ನಮ್ಮವೀರಣ್ಣ, ಮುಖಂಡರಾದ ಶಾಂತಮಲ್ಲ್ಲಪ್ಪ, ಸಿ. ಮಹದೇವಪ್ಪ, ಬಿ. ನಂಜಪ್ಪ, ಕುಮಾರ್, ನೌಕರರಾದ ಸಿ. ಮಹದೇವಸ್ವಾಮಿ, ಬಿ. ಮಹೇಂದ್ರ, ಬಿ. ಗೌತಮ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.