ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಿ: ಡಾ.ಶಿವಕುಮಾರ್

ದಾವಣಗೆರೆ.ಮೇ.೧೬: ಜಾಗತಿಕ ಮಟ್ಟದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಯುವ ವಿಜ್ಞಾನಿಗಳು ಉತ್ತಮ ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಲೇಷ್ಯಾದ ಮಲಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸಿಸ್ಟಂ ಅಂಡ್ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಶಿವಕುಮಾರ್ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ಅಧ್ಯಯನ ವಿಭಾಗದಲ್ಲಿ  ಏರ್ಪಡಿಸಿದ್ದ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಶೋಧನಾ ಕ್ಷೇತ್ರವು ವಿಶಾಲವಾಗಿದೆ. ಅಪರಿಚಿತ ಕ್ಷೇತ್ರದಲ್ಲಿ ಅಧ್ಯಯನ ನಡೆಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.ಸಂಶೋಧನೆಯಲ್ಲಿ ಸಮಸ್ಯೆಯ ಆಳಕ್ಕೆ ಇಳಿದಷ್ಟೂ ಹೊಸ ವಿಚಾರಗಳು, ವಿಷಯಗಳು ಹೊರ ಬರುತ್ತವೆ. ವಿಜ್ಞಾನ, ತಂತ್ರಜ್ಞಾನ, ಸಮಾಜ ವಿಜ್ಞಾನ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವಾಗ ಸಮಸ್ಯೆಗಳು ಸಮಾಜದ ಅಗತ್ಯಗಳನ್ನು ಈಡೇರಿಸುವಂತಿರಬೇಕು. ಸಂಶೋಧನಾರ್ಥಿಗಳು ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಿ, ಅಧ್ಯಯನ ಮಾಡಬೇಕು. ಸಂಶೋಧನಾ ಫಲಿತಾಂಶಗಳು ವಾಸ್ತವವಾಗಿದ್ದು, ನಿಖರವಾದ ವಿಚಾರಗಳನ್ನು ಪ್ರತಿಪಾದಿಸಬೇಕು. ಆ ಮೂಲಕ ಭಾರತವನ್ನು ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ಎಲ್ಲರ ಹೊಣೆ ಎಂದು ತಿಳಿಸಿದರು.ಸಂವಾದ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಅವರು ಸಂಶೋಧನಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು.ಇದೇ ಸಂದರ್ಭದಲ್ಲಿ ಡಾ.ಶಿವಕುಮಾರ್ ಅವರನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸನ್ಮಾನಿಸಿದರು. ಕಂಪ್ಯೂಟರ್ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಚಂದ್ರಕಾAತ ನಾಯ್ಕೊಡಿ, ವಿಭಾಗದ ಸಹಪ್ರಾಧ್ಯಾಪಕ ಡಾ.ಎಂ.ಬಸವಣ್ಣ, ಸಂಶೋಧನಾರ್ಥಿಗಳಾದ ಟಿ.ಚಂದ್ರಯ್ಯ, ಪಿ.ಪ್ರಜ್ವಲಕುಮಾರ್ ಮತ್ತಿತರರು ಉಪಸ್ಥಿತರಿದ್ದರು.