
ಬೆಂಗಳೂರು,ಆ.೩೦-ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ಖದೀಮನ ಮೇಲೆ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಗುಂಡು ಹಾರಿಸಿದ್ದು ಅದು ಆತನಿಗೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ನಡೆದಿದೆ.ಹಲವು ದಿನಗಳಿಂದ ಅರಣ್ಯದಲ್ಲಿ ಶ್ರೀಗಂಧದ ಮರಗಳು ಕಳುವಾಗಿದ್ದು, ಅರಣ್ಯದಲ್ಲಿ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಬಂದಿದ್ದರು.ಇದೇ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಶರಣಾಗದೆ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್ಗಾರ್ಡ್ ವಿನಯ್ ರಿವಲ್ವಾರ್ನಿಂದ ಗುಂಡು ಹಾರಿಸಿದ್ದಾರೆ.ಗುಂಡೇಟು ತಗುಲಿದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊರ್ವ ಪರಾರಿಯಾಗಿದ್ದಾನೆ. ಮೃತನು ಮಾಲೂರು ಮೂಲದವನೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ಗಸ್ತು ತಿರುಗುತ್ತಿದ್ದರು. ಈ ಜಾಗದಲ್ಲಿ ವನ್ಯ ಜೀವಿಗಳು ಹಾಗೂ ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದೆ. ಹೀಗಾಗಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಕೇಳದೆ ಇದ್ದಾಗ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.ಈ ವೇಳೆ ಮತ್ತೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ಮುಖ್ಯ ರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಕಾಂಪೌಂಡ್ ಜಿಗಿದು ಬಂದಿರುವ ಶಂಕೆ ಇದೆ. ಸ್ಥಳದಲ್ಲಿ ಗರಗಸ, ಮಚ್ಚುಗಳು ಸಿಕ್ಕಿವೆ. ಬೆರಳಚ್ಚು ದಳ,ಶ್ವಾನದಳ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ದ ತಂಡದವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.