ಕಲಬುರಗಿ:ಜೂ.9: ನಮ್ಮ ಭಾಗದಲ್ಲಿ ಭೂಮಿಯ ಉಷಾಂಶ ಪ್ರಮಾಣ ಹೆಚ್ಚಾಗಿರುವುದುರಿಂದ ಭೂಮಿಯಲ್ಲಿನ ತೇವಾಂಶ ಪ್ರಮಾಣ ಕಡಿಮೆಯಿದೆ. ಆದ್ದರಿಂದ ಗಿಡ-ಮರಗಳು ನೀರಿನ ಕೊರತೆಯಿಂದ ಒಣಗುವ ಸಂಭವವಿರುವದರಿಂದ ಗಿಡಗಳನ್ನು ನೆಡುವುದರ ಜೊತೆಗೆ ಆಗಾಗ್ಗೆ ಅವುಗಳಿಗೆ ನೀರುಣಿಸುವ ಮೂಲಕ ಸಂರಕ್ಷಿಸಬೇಕಾಗಿದೆ ಎಂದು ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಜರುಗಿದ ಗಿಡಗಳಿಗೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆ ಅಗತ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆ ಎಂದರೆ, ಅಭಿವೃದ್ಧಿ ಮತ್ತು ಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ ಎಂದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ನಮ್ಮ ಜಿಲ್ಲೆಯಲ್ಲಿರುವ ಅರಣ್ಯದ ಪ್ರಮಾಣದ ಹೆಚ್ಚಾಗಬೇಕಾದರೆ, ಎಲ್ಲೆಡೆ ವ್ಯಾಪಕವಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯವಾಗಬೇಕಾಗಿದೆ ಎಂದರು.
ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾ ಚಿಕ್ಕಮೇಟಿ, ರಂಜಿತಾ ಠಾಕೂರ್, ಸಮೀನಾ ಬೇಗಂ, ಪ್ರ.ದ.ಸ ನೇಸರ ಎಂ.ಬೀಳಗಿಮಠ ಸೇರಿದಂತೆ ಮತ್ತಿತರರಿದ್ದರು.