ಕಲಬುರಗಿ:ಅ.2:ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಮಹಾತ್ಮಾ ಗಾಂಧಿಜೀ ಯವರ ಅವಿಶ್ರಮ ಮತ್ತು ತ್ಯಾಗಗಳೇ ಕಾರಣವಾಗಿವೆ. ಅವರ ಶಾಂತಿ ಮತ್ತು ಅಹಿಂಸಾತ್ಮಕ ಹೋರಾಟಗಳು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಖ್ಯಾತ ಕನ್ನಡ ಚಲನಚಿತ್ರ ಹಿರಿಯ ನಟ ರಮೇಶ್ ಭಟ್ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಏರ್ಪಡಿಸಿದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಶರಣರು, ಸಂತರು ನಡೆದಾಡಿದ ನೆಲವಿದು. ಇಲ್ಲಿಯ ಸಾಹಿತ್ಯ-ಸಾಂಸ್ಕøತಿಕ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಬೇಕಾಗಿದೆ. ಇಲ್ಲಿನ ನೆಲ ಅತ್ಯಂತ ಪವಿತ್ರವಾದುದು. ಇಲ್ಲಿಯ ಜನರು ಸಾಹಿತ್ಯ ಪ್ರೇಮಿಗಳು, ಸಂಸ್ಕಾರಿಗಳು ಮತ್ತು ಶಾಂತಿಪ್ರಿಯ ಜನರಾಗಿದ್ದಾರೆ. ಈ ಭಾಗದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯ ಅದ್ಭುತ ಸೊಗಡನ್ನು ನಾಡಿಗಾಗಿ ಅರ್ಪಿಸುವ ಕೆಲಸ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಗಾಂಧಿ ಪ್ರತಿಪಾದಿಸಿದ ಸತ್ಯ, ಶಾಂತಿ, ಅಹಿಂಸೆ ತತ್ವ ಸಿದ್ದಾಂತಗಳು ಇಂದಿನ ಆಧುನಿಕ ಕಾಲದಲ್ಲಿ ದಿನದಿಂದ ದಿನಕ್ಕೆ ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿ. ಮಹಾತ್ಮಾ ಗಾಂಧಿಜೀ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಸರಳತೆ, ಸತ್ಯ, ಅಹಿಂಸೆಗಳೇ ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು. ಗಾಂಧಿಜೀ ಹಾಗೂ ಶಾಸ್ತ್ರೀಜೀ ಅವರ ಸಾಮಾಜಿಕ ಬದ್ಧತೆ, ಜೀವನ ಮತ್ತು ಮಾದರಿ ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆ. ಅವರ ಸತ್ಯದ ಹಾದಿ ಮತ್ತು ಪ್ರಾಮಾಣಿಕತೆ ನಮ್ಮೆಲ್ಲರಿಗೂ ದೀವಿಗೆ ಎಂದು ಹೇಳಿದರು.
ಪರಿಷತ್ನ ಶಿವರಾಜ್ ಅಂಡಗಿ, ಯಶ್ವಂತರಾಯ್ ಅಷ್ಟಗಿ, ಶರಣರಾಜ್ ಛಪ್ಪರಬಂದಿ, ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ್, ರೇವಣಸಿದ್ದಪ್ಪ ಜೀವಣಗಿ, ಪ್ರಮುಖರಾದ ವಿ.ಬಿ.ಪತ್ತಾರ್, ಡಾ. ಬಾಬುರಾವ್ ಶೇರಿಕಾರ್, ನಾಗರಾಜ್ ಜಮದರಖಾನಿ, ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಭವ್ ಪಟ್ಟಣಕರ್, ಪ್ರಭುಲಿಂಗ್ ಮೂಲಗೆ, ಸಂತೋಷ್ ಕುಡಳ್ಳಿ, ಮಲ್ಲಿಕಾರ್ಜುನ್ ಇಬ್ರಾಹಿಂಪುರ, ಶಿವಶರಣ್ ಪರಪ್ಪಗೋಳ್, ವಿಜಯಕುಮಾರ್ ಹಾಬಾನೂರ್, ರೇವಯ್ಯಾ ಸ್ವಾಮಿ, ಶಿವಾನಂದ್ ಮಠಪತಿ, ಸಿದ್ಧಾರಾಮ್ ಹಂಚನಾಳ್, ಈರಣ್ಣಾ ಸೋನಾರ್, ವಿಶಾಲಾಕ್ಷಿ ದೇಸಾಯಿ, ಶ್ರೀಕಾಂತ್ ಪಾಟೀಲ್ ದಿಕ್ಸಂಗಿ, ಗಣೇರ್ಶ ಚಿನ್ನಾಕಾರ್, ಸಂಗನಬಸಪ್ಪ ಪಾಟೀಲ್ ದಿಕ್ಸಂಗಿ, ಚಂದ್ರಶೇಖರ್ ಮ್ಯಾಗೇರಿ, ರಫೀಕ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.