ಗಮನ ಸೆಳೆದ `ಕೆಂಡ’ ಸದ್ದಿಲ್ಲದೆ ಚಿತ್ರೀಕರಣ ಪೂರ್ಣ

ಗಂಟುಮೂಟೆ ಚಿತ್ರ ತೆರೆಗೆ ತಂದಿದ್ದ ಚಿತ್ರ ಇದೀಗ “ಕೆಂಡ” ಮೂಲಕ ಮತ್ತೊಮ್ಮೆ ಭರವಸೆ ಮೂಡಿಸಲು ಮುಂದಾಗಿದೆ. ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಮುಂದಿಟ್ಟುಕೊಂಡು ಕಟ್ಟಿಕೊಟ್ಡಿರುವ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಅಂತಿಮ ಘಟ್ಟದಲ್ಲಿದೆ.
ಗಂಟುಮೂಟೆ ಮೂಲಕ ಬೆರಗು ಮೂಡಿಸಿದ್ದ ರೂಪಾ ರಾವ್ ಮತ್ತು ಛಾಯಾಗ್ರಾಹಕರಾಗಿದ್ದುಕೊಂಡು, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವಡಿ ಒಟ್ಟುಗೂಡಿ ಕೆಂಡ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.
ಚಿತ್ರದ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೆ ಹೊಸೆದು ಕೊಂಡ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿರುವುದು ವಿಶೇಷ.
ಪ್ರಸಕ್ತ ಸನ್ನಿವೇಷಗಳಿಗೆ ತಕ್ಕುದಾದ ಕಥನ ರಗಡ್ ಶೈಲಿಯಲ್ಲಿದೆ ಎಂಬುದನ್ನು ಶೀರ್ಷಿಕೆಯೇ ಸಾರಿ ಹೇಳಿದೆ.. ಪಾತ್ರಗಳು ಆ ನಂಬಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸಿವೆ.
ಸಚ್ಚಾ ನಿರ್ವಹಿಸಿರುವ ಲೋಕೇಶ್ ಪಾತ್ರ, ಜಯರಾಮ್ ನಟಿಸಿರುವ ಶರತ್ ಗೌಡ, ಪ್ರಣವ್ ಶ್ರೀಧರ್ ವಿನಾಯಕ ಪಾತ್ರ, ಕೇಶವನಾಗಿರುವ ಬಿ.ವಿ ಭರತ್ ಗಮನ ಸೆಳೆದಿದ್ದಾರೆ.
ಕೆಂಡದ ತಾರಾಗಣವೆಲ್ಲ ಹೊಸಬರಿಂದಲೇ ತುಂಬಿಕೊಂಡಿದೆ. ರಂಗಭೂಮಿ ಪ್ರತಿಭೆಗಳಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.