ಗಣಿತ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕ

ಕಲಬುರಗಿ:ಜು.24: ಗಣಿತ ಒಳಗೊಂಡಿರುವ ಲೆಕ್ಕಾಚಾರಗಳನ್ನು ಮಾಡುವುದರಿಂದ ತಾರ್ಕಿಕ ಶಕ್ತಿ, ಆಲೋಚನಾ ಸಾಮಥ್ರ್ಯ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದೊಂದು ಕೇವಲ ವಿಷಯವಾಗಿರದೆ, ಜೀವನದ ಅಂಗವಾಗಿದೆ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು. ಗಣಿತ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯಮಾಡುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಪೈ ದಿನಾಚರಣೆ’ಯನ್ನು ಅವರು ಮಾತನಾಡುತ್ತಿದ್ದರು.
ಗಣಿತವೆನ್ನುವದು ಕಬ್ಬಿಣದ ಕಡಲೆಯಲ್ಲ. ಇದನ್ನು ತುಂಬಾ ಆಸಕ್ತಿಯಿಂದ ಅಧ್ಯಯನ ಮಾಡಿದರೆ ಸರಳವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯವನ್ನು ಶಿಕ್ಷಕರು ಮತ್ತು ಪಾಲಕರು ಹೋಗಲಾಡಿಸಬೇಕಾದದ್ದು ಅಗತ್ಯವಾಗಿದೆಯೆಂದರು.
ಗಣಿತ ಶಿಕ್ಷಕ, ಟ್ಯೂಟೋರಿಯಲ್ಸ್ ಮುಖ್ಯಸ್ಥ ಶಿವಕುಮಾರ ಮುತ್ತಾ ಮಾತನಾಡಿ, ಪೈ(π) ಒಂದು ಗಣಿತದ ಸ್ಥಿರಾಂಕವಾಗಿದ್ದು, ಅದರ ಮೊತ್ತ 22/7 ಅಥವಾ 3.142 ಆಗಿದೆ. ಇದು ವೃತ್ತದ ಸುತ್ತಳತೆ ಮತ್ತು ವ್ಯಾಸದ ಅನುಪಾತವಾಗಿದೆ. ಗಣಿತಶಾಸ್ತ್ರಜ್ಞ ವಿಲಿಯಂ ಜೋನ್ಸ್ ವ್ಯಾಪಕವಾಗಿ ಇದನ್ನು ಬಳಸಿ, ಪ್ರಸಿದ್ಧಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಹಾಗೂ ವಿದ್ಯಾರ್ಥಿಗಳಿದ್ದರು.