
ಕೋಲಾರ ಮೇ. ೧೫- ಪ್ರಸಕ್ತ ಸಾಲಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಮಕ್ಕಳನ್ನು ದಾಖಲಿಸಿಕೊಳ್ಳಲು ನಾ ಮುಂದು ತಾ ಮುಂದು ಪೈಪೋಟಿಗೆ ಬಿದ್ದು ಪೋಷಕರಿಂದ ದುಬಾರಿ ಶುಲ್ಕವನ್ನು ಕೀಳುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಮ್ಮ ಕೋಲಾರ ರೈತ ಸಂಘ ಸಂಸ್ಥಾಪಕ ಜಿಲ್ಲಾಧ್ಯಕ್ಷರಾದ ಕೋಟಿಗಾನಹಳ್ಳಿ ಗಣೇಶಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿ ನೀಡಿ ಕೋಟಿಗಾನಹಳ್ಳಿ ಗಣೇಶಗೌಡ ಮಾತನಾಡಿರುವ ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಆರಂಭಗೊಳ್ಳುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ದುಬಾರಿ ಶುಲ್ಕವನ್ನು ಕೀಳಲು ಮುಂದಾಗಿದ್ದಾರೆ. ಎಲ್.ಕೆ.ಜಿ ದಾಖಲಾತಿಗೆ ಪೋಷಕರಿಂದ ೫೦ರಿಂದ ೮೦ ಸಾವಿರದವರೆಗೂ ಹಣವನ್ನು ಕೀಳುತ್ತಿದ್ದಾರೆ. ದುಬಾರಿ ಶುಲ್ಕ ನೀಡದ ಪೋಷಕರಿಗೆ ನಮ್ಮ ಶಾಲೆಯಲ್ಲಿ ದಾಖಲಾತಿ ಮುಕ್ತಾಯಗೊಂಡಿದೆ ಎಂದು ನೇರವಾಗಿ ಹೇಳುತ್ತಾರೆ.
ಈ ಕೂಡಲೇ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಪೋಷಕರೊಂದಿಗೆ ಇಲಾಖೆಯ ಎದರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.