
ಎನ್.ವೀರಭದ್ರಗೌಡ
ಬಳ್ಳಾರಿ, ಏ.27: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರ ಈ ಹಿಂದಿನ ಹೊಸಪೇಟೆ, ಕುರುಗೋಡು, ಸಿರುಗುಪ್ಪ ಕ್ಷೇತ್ರದ ಕೆಲ ಭಾಗಗಳನ್ನು ಒಳಗೊಂಡು 2008 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಇದು ಪರಿಶಿಷ್ಟ ವರ್ಗಕ್ಕೆ ಮೀಸಲಿದೆ.
ಬಳ್ಳಾರಿ ತಾಲೂಕಿನ ಕೋಳೂರು, ಕಂಪ್ಲಿ ತಾಲೂಕಿನ ಎಮ್ಮಿಗನೂರು, ದೇವಸಮುದ್ರ, ಹೊಸಪೇಟೆ ತಾಲೂಕಿನ ರಾಮಸಾಗರ ಹೋಬಳಿಗಳ ಹಳ್ಳಿಗಳು ಹಾಗು ಕಂಪ್ಲಿ ಪುರಸಭೆ ಮತ್ತು ಕುರುಗೋಡು ಪಟ್ಟಣ ಪಂಚಾಯ್ತಿಯ ವ್ಯಾಪ್ತಿ ಹೊಂದಿದೆ.
ತುಂಗಭದ್ರ ಅಚ್ಚು ಕಟ್ಟು ಪ್ರದೇಶದಿಂದ ಸಂಪೂರ್ಣ ನಿರಾವರಿ ಪ್ರದೇಶ ಭತ್ತ, ಬಾಳೆ, ಕಬ್ಬು, ಮೆಣಸಿನಕಾಯಿ, ಮುಸಕಿನಜೋಳ ಮುಖ್ಯ ಬೆಳೆ, ಕಂಪ್ಲಿ ಪಟ್ಟಣ ಅಕ್ಕಿ ಉತ್ಪಾದನೆಗೆ ಹೆಸರಾಗಿದೆ.
ಕಂಪ್ಲಿಯಲ್ಲಿದ್ದ ಸಕ್ಕರೆ ಕಾರ್ಖಾನೆ ಮುಚ್ಚಿದ ಮೇಲೆ ಆರಂಭ ಮಾಡ್ತೇವೆ ಅಂತ ಹೇಳುತ್ತಲೇ ಹಲವು ಚುನಾವಣೆಗಳು ಕಳೆದವು.
ಕಂಪ್ಲಿ ಪುರಸಭೆ, ಕುರುಗೋಡು ಪಟ್ಟಣ ಪಂಚಾಯ್ತಿಯನ್ನು ಹೊಂದಿವೆ.
ಬಾದಾಮಿ ಚಾಲುಕ್ಯರು ಹಾಗು ಹೊಯ್ಸಳರ ಕಾಲದ ಶಿಲ್ಪಕಲೆಯ ದೇಗುಲಗಳನ್ನು ಹೊಂದಿರುವ ಕುರುಗೋಡು ಪಟ್ಟಣ ಈ ಕ್ಷೇತ್ರದ ಪ್ರವಾಸಿ ಹಾಗು ಧಾರ್ಮಿಕವಾಗಿ ಪ್ರಸಿದ್ದಿ ಪಡೆದಿರುವ ತಾಣ,
ಕ್ಷೇತ್ರದಲ್ಲಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇಲ್ಲ. ಶಿಕ್ಷಣದ ವ್ಯವಸ್ಥೆ ಅಷ್ಟಕ್ಕಷ್ಟೇ, ಈ ಕ್ಷೇತ್ರದಲ್ಲಿ ನಡೆದ ಕಳೆದ ಮೂರು ಚುನಾವಣೆಯಲ್ಲಿ
ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಬಿಎಸ್ ಆರ್, ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸ್ಥಳೀಯರು ಈ ವರೆಗೆ ಶಾಸಕರಾಗಿ ಈವರೆಗೆ ಆಯ್ಕೆಯಾಗಿಲ್ಲ. ಈ ಬಾರಿಯೂ ಹೊರಗಿನವರೇ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಂಪ್ಲಿ, ಕುತುಗೋಡಿನಲ್ಲಿ ಮನೆ ಮಾಡಿದೆಂದು ಹೆರಳಿದರೂ, ಗೆದ್ದ ನಂತರ ಅವರು ಇರುವುದು ಅವರವರ ಊರಿನಲ್ಲಿಯೇ. ಈ ಕ್ಷೇತ್ರದಲ್ಲಿ ಸ್ಥಳೀಯರಾದ ಮಾರೆಕ್ಕ ಎನ್ನುವ ಮಂಗಳಮುಖಿ ಸ್ಪರ್ಧಾ ಕಣದಲ್ಲಿರುವುದು ವಿಶೇಷವಾಗಿದೆ.
ಮಾಜಿ ಶಾಸಕ ಟಿ. ಹೆಚ್. ಸುರೇಶ್ ಬಾಬು ಬಿಜೆಪಿಯಿಂದ, ಹಾಲಿ ಶಾಸಕ ಜೆ.ಎನ್. ಗಣೇಶ್ ಕಾಂಗ್ರೆಸ್ ನಿಂದ, ರಾಜುನಾಯಕ್ ಜೆಡಿಎಸ್ ನಿಂದ ಕಣದಲ್ಲಿದ್ದು ಇವರಲ್ಲದೆ 7 ಜನರು ಕಣದಲ್ಲಿದ್ದಾರೆ.
ಈ ಕ್ಷೇತ್ರದಲ್ಲಿ 1,06,528 ಪುರುಷ ಮತದಾರರು, 1,07,882 ಮಹಿಳೆ ಮತದಾರರು ಹಾಗೂ 29 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,14,439 ಮತದಾರರಿದ್ದಾರೆ. ಅದರಲ್ಲಿ 7,958 ಯುವ ಮತದಾರರು, 2,509 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,309 ವಿಶೇಷ ಚೇತನ ಮತದಾರರಿದ್ದಾರೆ. ಮತದಾನಕ್ಕೆ 240 ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ.