ಎನ್.ವೀರಭದ್ರಗೌಡ
ಬಳ್ಳಾರಿ:ಏ,29- ವಿಜಯನಗರ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಪೈಕಿ ಕೂಡ್ಲಿಗಿ ಕ್ಷೇತ್ರ ಮೊದಲುನಿಂದಲೂ ಅಸ್ತಿತ್ವದಲ್ಲಿದೆ. ಈ ಮೊದಲು ಸಾಮನ್ಯವಾಗಿದ್ದ ಈ ಕ್ಷೇತ್ರ 2008 ರಿಂದ ಪರಿಶಿಷ್ಟ ವರ್ಗಕ್ಕೆ ಮೀಸಲಿದೆ. ಕ್ಷೇತ್ರ ವಿಂಗಡಣೆಯಿಂದ. ಈ ಮೊದಲು ಹೊಂದಿದ್ದ ಹಗರಿಬೊಮ್ಮನಹಳ್ಲಿ ತಾಲೂಕು ಪ್ರದೇಶವನ್ನು ಬಿಟ್ಟು, ಈ ಮೊದಲಿನ ಕೊಟ್ಟೂರು ಕ್ಷೇತ್ರದ ಖಾನಾ ಹೊಸಳ್ಳಿ, ಗುಡೇಕೋಟೆ, ಹೋಬಳಿಗಳನ್ನು ಸೇರಿಸಿಕೊಂಡಿದೆ.
ಸಂಪೂರ್ಣ ಮಳೆಯಾಧಾರಿತ ಕೃಷಿಯನ್ನು ಹೊಂದಿದ್ದು ಕ್ಷೇತ್ರದಲ್ಲಿ 75 ಕ್ಕೂ ಹೆಚ್ಚು ಕೆರೆಗಳಿವೆ. ಮಳೆಯ ಜೊತೆ ಕೆರೆ ನೀರು, ಬೋರವೆಲ್ ಗಳಿಂದ ಕೃಷಿ,ಶೇಂಗಾ, ಜೋಳ, ಪ್ರಮುಖ ಬೆಳೆಗಳ ಜೊತೆಗೆ ಒಂದಿಷ್ಟು ಸೇವಂತೆ, ಕನಕಾಂಬರ್ ಮೊದಲಾದ ಪುಷ್ಪ ಕೃಷಿ ತೋಟಗಳಲ್ಲಿ ನಡೆಯುತ್ತದೆ.
ಕ್ಷೇತ್ರದ ರಸ್ತೆಗಳೆಲ್ಲ ಹುಣಸೆ ಮರಗಳಿಂದ ಕೂಡಿದ್ದು. ಇಲ್ಲಿನ ಈ ಹುಣಸೆ ಆಯಾ ಗ್ರಾಮ ಆಡಳಿತಕ್ಕೆ ಆದಾಯ ತರುತ್ತಿರುವುದರ ಜೊತೆಗೆ ಜನತೆಗೆ ಉದ್ಯೋಗ ನೀಡುತ್ತದೆ. ಈ ಹುಣಸೆ ನೆರೆ ರಾಜ್ಯಗಳಿಗೂ ಸಾಗಾಟವಾಗುತ್ತದೆ.
ಗುಡೇಕೋಟೆ ಬಳಿಯ ಬೆಟ್ಟ ಪ್ರದೇಶದಲ್ಲಿ ಕರಡಿಗಳ ಸಂರಕ್ಷಣೆ ಮತ್ತು ಪರಿಸರ ಪ್ರವಾಸಿ ತಾಣವಾಗಿ ಕರಡಿಧಾಮ ಸ್ಥಾಪಿಸಿದೆ.
ಗುಡೇಕೋಟೆ ಒನಕೆ ಓಬವ್ವನ ತವರು. ಹಲವು ತಾಂಡಾ ಮತ್ತು ಹಟ್ಟಿಗಳಿಂದ ಕೂಡಿರುವ ಈ ಕ್ಷೇತ್ರದಲ್ಲಿ ಉತ್ತಮ ರಸ್ತೆಗಳಿವೆ. ಬೋರ್ವೆಲ್ ನೀರಿನಲ್ಲಿ ಪ್ಲೋರೈಡ್ ಹೆಚ್ಚು ಇರುವುದರಿಂದ ಶುದ್ದೀಕರಣ ಘಟಕಗಳನ್ನು ಸ್ಥಾಪಿಸಿದೆ ಆದರೂ ಕುಡಿಯುವ ನೀರಿಗೆ ಒಂದಿಷ್ಡು ಬರ, ಅದಕ್ಕಾಗಿ ತಾಲೂಕಿನ 212 ಹಳ್ಳಿಗಳಿಗೆ ತುಂಗಭದ್ರ ಜಲಾಶಯದಿಂದ ನೀರನ್ನು ತರುವ ಯೋಜನೆ ಸಾಗುತ್ತಲೇ ಇದೆ ಇನ್ನೂ ಪೂರ್ಣಗೊಂಡಿಲ್ಲ.
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಹೊಂದಿದ್ದು. ನಾಂದೇಡದಿಂದ ಚಿತ್ರದುರ್ಗವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 50 ಈ ಕ್ಷೇತ್ರದಲ್ಲಿ ಹಾದು ಹೋಗಿದೆ ಕೂಡ್ಗಿಗಿ ಪಟ್ಟಣ ರಾಷ್ಟ್ರಪಿತ ಗಾಂಧೀಜಿ ಅವರ ಚಿತಾ ಭಸ್ಮದ ಸ್ಮಾರಕವನ್ನು ಹೊಂದಿದೆ. ಸರ್ಕಾರದ ಪದವಿ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಹೊಂದಿದೆ.
ಮತದಾರರು:
ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,03,753,
ಪುರುಷ ಮತದಾರರು 103387, ಮಹಿಳಾ ಮತದಾರರು 100352,
ಇತರೇ 14,
ಒಟ್ಟು ಮತಗಟ್ಟೆಗಳು 245.
ಕಣದಲ್ಲಿ:
ಈ ಕ್ಷೇತ್ರದಲ್ಲಿ ಈ ಹಿಂದೆ ಹೆಚ್ಚಿನದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು 2004 ರಿಂದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಹೆಚ್.ಡಿ.ದೇವೆಗೌಡರ ಸಂಪುಟದಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎನ್.ಎಂ.ನಬಿ ಅವರು ಮಾತ್ರ ಈ ಕ್ಷೇತ್ರದಿಂದ ಆಯ್ಕೆಯಾದವರಲ್ಲಿ ಸಚಿವರಾಗಿರುವುದು.
2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎನ್. ವೈ ಗೋಪಾಲ ಕೃಷ್ಣ ಆಯ್ಕೆಯಾಗಿದ್ದರು.
ಈ ಬಾರಿ ಸ್ಪರ್ಧೆ ಮಾಡಿರುವ ಪ್ರಮುಖ ಅಭ್ಯರ್ಥಿಗಳೆಲ್ಲ ಪಕ್ಷಾಂತರಿಗಳಾಗಿದ್ದಾರೆ ಒಟ್ಟಾರೆ 8 ಜನ ಕಣದಲ್ಲಿದ್ದಾರೆ.
ಬಿಜೆಪಿಯಿಂದ ಲೋಕೇಶ್ ವಿ. ನಾಯಕ, ಕೋಡಿಹಳ್ಳಿ ಭೀಮಪ್ಪ ಜೆಡಿಎಸ್ ನಿಂದ, ನಾರಿ ಶ್ರೀನಿವಾಸ್ ಆಮ್ ಆದ್ಮಿಯಿಂದ, ಡಾ.ಶ್ರೀನಿವಾಸ ಎನ್.ಟಿ.ಕಾಂಗ್ರೆಸ್ ನಿಂದ, ಅಮ್ಮನಕೇರಿ ಚನ್ನವೀರ ಕೆಆರ್ಎಸ್ ನಿಂದ, ಹೆಚ್. ವೀರಣ್ಣ ಸಿಪಿಐ ನಿಂದ, ಶರಣೇಶ ಎಂ. ಉತ್ತಮ ಪ್ರಜಾಕೀಯ ಪಕ್ಷದಿಂದ ಕೆ. ನಕುಲಪ್ಪ ಪಕ್ಷೇತರರಾಗಿ ಕಣದಲ್ಲಿದ್ದಾರೆ.