
(ಸಂಜೆವಾಣಿ ವಾರ್ತೆ)
ನವಲಗುಂದ,ಆ26 : ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಿಗೆ ಆದ್ಯತೆ ನೀಡುವುದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಒತ್ತಡ ನಿವಾರಣೆಯೂ ಆಗುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳು ಅದರಲ್ಲೂ ದೇಶಿ ಕ್ರೀಡೆಗಳತ್ತ ಆಸಕ್ತಿ ವಹಿಸಬೇಕೆಂದು ಎ ಬಿ,ಕೊಪ್ಪದ ಹೇಳಿದರು.
ತಾಲೂಕಿನ ನಾಗನೂರು ಗ್ರಾಮದಲ್ಲಿನ ಶಾರದಾ ಶಿಕ್ಷಣ ಸಂಸ್ಥೆ ಹಾಗೂ ಕ್ಲಸ್ಟರ್ ವಲಯ 2ರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ತಂತ್ರಜ್ಞಾನ ಯುಗದಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಜಗತ್ತಿನಾದ್ಯಂತ ಕ್ರೀಡೆಗಳಿಗೆ ಮಹತ್ವವಿದ್ದು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಮೂಲಕ ಕಲಿತ ಶಾಲೆಗೆ ಕೀರ್ತಿ ತರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ಎಂ,ಕೆ,ಹಿರೇಮಠ ಪ್ರತಿವರ್ಷವೂ ವಲಯ ಮಟ್ಟದಲ್ಲಿ ಪ್ರಾಥಮಿಕ ಶಾಲಾ ಕ್ರೀಡಾ ಕೂಟಗಳು ನಡೆಯುತ್ತವೆ ಆದರೆ ಈ ವರ್ಷ ಶಾರದಾ ಶಿಕ್ಷಣ ಸಂಸ್ಥೆಗೆ ಕ್ರೀಡಾಕೂಟದ ಆತಿಥ್ಯ ಸಿಕ್ಕಿದ್ದು ಈ ಭಾಗದ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಮೂಡಿಸಲು ಪ್ರೇರಣೆ ನೀಡಿದಂತಾಗಿದೆ ಎಂದರು.
ಶಾಲಾ ಮುಖ್ಯೋದ್ಯಾಪಕಿ ಪುಷ್ಪಾವತಿ ಹಿರೇಮಠ, ಶಂಭೂ ಹೊಳೆಯಣ್ಣವರ, ತಾಲೂಕಾ ದೈಹಿಕ ನಿರ್ದೇಶಕ ಎನ್,ವಿ,ಬೀಡಿ, ಎಸ್,ಎಚ್,ಹಿರೇಮಠ, ಆರ್,ಎಚ್,ನೇಗಲಿ, ಗುರುನಾಥ ಉಳ್ಳಾಗಡ್ಡಿ, ಶಿವು ಹಿರೇಮಠ ಮತ್ತಿತರರಿದ್ದರು.