
ಚಿತ್ರದುರ್ಗ.ಏ.೭; ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ಅನಿಯಮಿತ ಹಣಕಾಸು ವ್ಯವಹಾರಗಳು ಕಂಡಲ್ಲಿ ಕೂಡಲೇ ಚುನಾವಣಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕ್ರೆಡಿಟ್ ಕೋ-ಆಪರೇಟಿವ್ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ರೂ.50,000-00 ಗಳಿಗಿಂತ ಹೆಚ್ಚಿನ ಹಣಕಾಸಿನ ವ್ಯವಹಾರ ಯಾವುದೇ ವೈಯಕ್ತಿಕ ವ್ಯಕ್ತಿ ಮಾಡುವಂತಿಲ್ಲ. ಎಲ್ಲಾ ಸಹಕಾರ ಸಂಘಗಳು ಯಾವುದೇ ಪಕ್ಷದ ಅಥವಾ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸುವಂತಿಲ್ಲ. ತಟಸ್ಥ ನೀತಿ ಅನುಸರಿಸಬೇಕು ಎಂದು ಸಹಕಾರಿ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮತದಾರರಿಗೆ ಆಮಿಷಕ್ಕೆ ಒಳಗಾಗುವ ರೀತಿ ಲೋನ್ ಇತ್ಯಾದಿ ಸೌಲಭ್ಯಗಳನ್ನು ನೀಡುವಂತಿಲ್ಲ. ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಮಾದರಿ ನೀತಿ ಸಂಹಿತೆ ಮುಗಿಯುವವರೆಗೂ ಬೋರ್ಡ್ ಅಥವಾ ಮಂಡಳಿ ಸಭೆ ನಡೆಸುವಂತಿಲ್ಲ ಎಂದು ತಿಳಿಸಿದರು.