ಕ್ರಾಂತಿಕಾರಿ ಕಾಯ್ದೆ ರೂಪಿಸಿ ಲಕ್ಷಾಂತರ ಬಡಗೇಣಿದಾರರಿಗೆ ಭೂಮಿ ನೀಡಿದ ಅರಸು ಧ್ರುವತಾರೆ

ದಾವಣಗೆರೆ. ಜೂ.೭; ದಿ.ಡಿ ದೇವರಾಜ ಅರಸುರವರು ರಾಜ್ಯ ಕಂಡ ಜನಪ್ರಿಯ ಶ್ರೇಷ್ಠ ಮುಖ್ಯಮಂತ್ರಿ ಆಗಿದ್ದಾರೆಂದು ಕೆಪಿಸಿಸಿ ವಕ್ತಾರರು ಹಾಗೂ ಕರ್ನಾಟಕ ಸರ್ಕಾರದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಅಭಿಪ್ರಾಯಪಟ್ಟರು ಅವರಿಂದು ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ಸಮಿತಿ ಏರ್ಪಡಿಸಿದ್ದ ದೇವರಾಜ ಅರಸುರವರ 41ನೇ ಪುಣ್ಯ ತಿಥಿ ಸಮಾರಂಭದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದೇವರಾಜ ಅರಸುರವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು ಸಮ ಸಮಾಜವನ್ನು ಕಟ್ಟಲು ಹಗಲಿರಲು ಶ್ರಮಿಸಿದರು. ತಲೆ ಮೇಲೆ ಮಲ ಹೋರುವ ಅನಿಷ್ಟ ಪದ್ದತಿಯನ್ನು ಹಾಗೂ ಜೀತ ಪದ್ದತಿಯನ್ನು ಪ್ರಬಲ ಕಾನೂನು ಮಾಡುವ ಮೂಲಕ ರದ್ದುಗೊಳಿಸಿದರು. ಭೂ ಸುಧಾರಣೆ ಕಾಯ್ದೆ ರೂಪಿಸಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಕಾನೂನಿನ ಮೂಲಕ ಲಕ್ಷಾಂತರ ಬಡಗೇಣಿದಾರರಿಗೆ ಭೂಮಿ ದೊರೆಯುವಂತೆ ಮಾಡಿದರು. ದೇವರಾಜ್ ಅರಸ್ ರವರು ತಾವು ಹೊಂದಿದ ಭೂಮಿಯನ್ನು ತಮ್ಮ ಹೊಲದ ಕೆಲಸ ಮಾಡುವ ಗೆಣಿದಾರರಿಗೆ ಬಿಟ್ಟುಕೊಟ್ಟ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದಾರೆ. ದಲಿತರು ಬಡವರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರಿಗೆ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ನೀಡಿ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಿದರು ಎಂದು ಡಿ ಬಸವರಾಜ್ ಅರಸುರವರನ್ನು ಸ್ಮರಿಸಿದರು.ದೇವರಾಜ ಅರಸು ರವರು ಅನುಸರಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆ ದೇಶದಲ್ಲಿಯೇ ಅನನ್ಯವಾದದ್ದು ಶತಶತಮಾನಗಳ ಕಾಲದಿಂದ ಶೋಷಣೆಗೆ ಒಳಗಾಗಿದ್ದ ಜನ ಸಮುದಾಯಗಳನ್ನು ಗುರುತಿಸಿ ಅವರಿಗೆ ಆಡಳಿತದಲ್ಲಿ ಪಾಲು ಪಡೆಯುವಂತೆ ಕಲ್ಪಿಸಿದ ವಿಶೇಷ ಅವಕಾಶಗಳು ದೇವರಾಜ್ ಅರಸರನ್ನು ಒಬ್ಬ ದಾರ್ಶನಿಕ ಮುತ್ಸದ್ದಿಯನ್ನಾಗಿಸಿತು. ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕವೆಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದು ದೇವರಾಜ ಅರಸು ರವರ ಗಟ್ಟಿತನವನ್ನು ತೋರಿಸುತ್ತದೆ ಎಂದರು.