ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನದ ಕುರಿತು ತರಬೇತಿ ಕಾರ್ಯಗಾರ

ರಾಯಚೂರು,ಏ.೨೪- ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನದ ಕುರಿತು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಎನ್.ಎಸ್.ಎಸ್ ಅಧಿಕಾರಿಗಳು, ಉಪನ್ಯಾಸಕರು ಈ ತರಬೇತಿ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಅವರು ಹೇಳಿದರು.
ಅವರು ಏ.೨೪ರಂದು ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ಎಸ್.ಎ.ಪಿ, ಕೌಶಲ್ಯ ಕರ್ನಾಟಕ, ಎನ್.ಎಸ್.ಎಸ್, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ(ಯುಎನ್.ಡಿ.ಪಿ) ಹಾಗೂ ಹೆಡ್,ಹೆಲ್ಡ್,ಹೈ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನಕುರಿತು ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ಹೆಡ್‌ಹೆಲ್ಡ್‌ಹೈ ವ್ಯವಸ್ಥಾಪಕ ರಾಘವೇಂದ್ರ ಅವರು ಮಾತನಾಡಿ, ಕೋಡ್ ಉನ್ನತಿ ಯೋಜನೆಯು ಪ್ರಥಮ ಹಂತದಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜಾರಿಗೆ ಬಂದಿದ್ದು, ೨೦೨೦ರಿಂದ ೨೩ರವರೆಗೆ ಒಟ್ಟು ಮೂರು ವರ್ಷಗಳ ವರೆಗೆ ಈ ಯೋಜನೆ ನಡೆದು ಬಂದು ಇದೀಗ ಮುಕ್ತಾಯದ ಹಂತದಲ್ಲಿದೆ ಎಂದರು.
ಯೋಜನೆಯಡಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಎನ್.ಎಸ್.ಎಸ್ ಅಧಿಕಾರಿಗಳಿಗೆ ಉದ್ಯಮಶೀಲತೆ ಮತ್ತು ವೃತ್ತಿ ಮಾರ್ಗದರ್ಶನದ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಯಚೂರು ವಿವಿಯ ರಿಜಿಸ್ಟ್ರಾರ್ ಹಾಗೂ ಎನ್.ಎಸ್,ಎಸ್ ಘಟಕದ ಸಂಯೋಜಕ ಡಾ.ಡಿಎಸ್ ಬಿರಾದಾರ, ಸಿಡಾಕ್‌ನ ಜಂಟಿ ನಿರ್ದೇಶಕ ಜಿ.ಎಸ್ ಹುಡೇದ್, ಯುಎನ್‌ಡಿಪಿ ಜಿಲ್ಲಾ ಸಹಾಯಕ ಶಶಿ ಕಾಂಬ್ಲೇಕರ್, ಸಮುದಾಯ ಸಂಯೋಜಕರಾದ ನರಸರೆಡ್ಡಿ, ಗಿರಿಜಾರಾಮ್, ವಿವಿಧ ಸರಕಾರಿ ಕಾಲೇಜುಗಳ ಪ್ರಾಂಶುಪಾಲರಾದ ಸವಿತಾ ನಾಯಕ, ಸುಮಂಗಲ, ಪಿ.ದೊರಸಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.