
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.24: ಸ್ವತಃ ಶಾಸಕ ಕಂಪ್ಲಿ ಜೆ.ಎನ್.ಗಣೇಶ್ ಅನ್ನ ಭಾಗ್ಯದ ಒಂದು ಸಾವಿರ ಚೀಲ ಅಕ್ಕಿಗೆ ಕನ್ನಹಾಕಿದವರನ್ನು ಹಿಡಿದುಕೊಟ್ಟಿರುವ ಘಟನೆ ನಿನ್ನೆ ಜಿಲ್ಲೆಯ ಕಂಪ್ಲಿ ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯ ಗೌರಮ್ಮನ ಕೆರೆ ಬಳಿಯ ಕೋಳಿಫಾರಂನಲ್ಲಿ ನಡೆದಿದೆ.
ಅದು ಮೇಲ್ನೋಟಕ್ಕೆ ಕೋಳಿ ಫಾರಂ, ಆದ್ರೆ ಒಳಗೆ ಹೋದರೆ ಅಲ್ಲಿ ಅನ್ನಭಾಗ್ಯದ ಸಾವಿರಾರು ಚೀಲ ಪಡಿತರದ ಅಕ್ಕಿ.
ಕಂಪ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಪಡಿತರ ಅಂಗಡಿಯಿಂದ ಹಂಚದ ಮತ್ತು ಪಡಿತರ ಅಂಗಡಿಯಿಂದ ಪಡೆದು ಅದನ್ನು ತಾವು ಬಳಸದೆ ಸಂಗ್ರಹಿಸಿದ ಅನ್ಮಭಾಗ್ಯದ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಿಸೋ ದೊಡ್ಡ ಜಾಲವನ್ನು ಶಾಸಕರೇ ಪತ್ತೆಹಚ್ಚಿದ್ದಾರೆ.
ದಿನಕ್ಕೆ ಎರಡು ಲಾರಿ ಅಕ್ಕಿಯನ್ನು ಲೋಡ್ ಮಾಡಿ ಕಂಪ್ಲಿಯಿಂದ ತಮಿಳುನಾಡು ಗುಜರಾತ್ ಕಡೆಗೆ ಸಾಗಣೆ ಮಾಡಲಾಗುತ್ತದೆಯಂತೆ.
ಒಂದು ಲಾರಿಯಲ್ಲಿ 50 ಕಿಲೋದ ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡುವ ಲಕ್ಷಾಂತರ ರೂಪಾಯಿ ವ್ಯವಹಾರ ಇದು.
ದಿನಕ್ಕೆ ಒಂದುವರೆ ಲಕ್ಷ ಲಾಭ ಪಡೆಯುವ ದಂಧೆಯಂತೆ ಇದು. ಇದರ ಹಿಂದೆ ಪ್ರಭಾವಿ ನಾಯಕ ಇದ್ದು ಅದನ್ನು ಇಲಾಖೆಯ ಅಧಿಕಾರಿಗಳು ಯಾರು ಅನ್ನೋದನ್ನು ಪತ್ತೆಹಚ್ಚಬೇಕು ಎಂಬುದು ಶಾಸಕ ಗಣೇಶ ಅವರದ್ದು.
ಶಾಸಕರು ನಿನ್ನೆ ರಾತ್ರಿ ದಾಳಿ ಮಾಡ್ತಿದ್ದಂತೆ ಸ್ಥಳದಿಂದ ಹಲವರು ಓಡಿ ಹೋದರೆ. ಸ್ಥಳೀಯರಲ್ಲದ ಮತ್ತು ಕನ್ನಡ ಭಾಷೆ ಬಾರದೇ ಇರುವ ನಾಲ್ವರು ಸಿಕ್ಕಿದ್ದಾರೆ. ಅವರಿಗೆ ಈ ದಂಧೆ ನಡೆಸುವವರು ಯಾರು ಎಂಬುದು ಗೊತ್ತಲ್ಲವಂತೆ.
ಶಾಸಕರ ದಾಳಿ ಮಾಡಿದ ಬಳಿಕ ಬಂದ ಪೊಲೀಸರು ಸಾವಿರಾರು ಚೀಲ ಅಕ್ಕಿ, ಲಾರಿ ಎಲ್ಲವನ್ನೂ ವಶಕ್ಕೆ ಪಡಿಸಿಕೊಂಡಿದ್ದಾರೆ. ಯಾರ ಮೇಲೆ ಪ್ರಕರಣ ದಾಖಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೋಟ್:
ಅಕ್ರಮ ನಡೆಯುವುದನ್ನು ತೋರಿಸಿದ್ದೇನೆ. ಈ ರೀತಿ ಇನ್ನೂ ನಡೆಯುತ್ತಿವೆ. ಇದರ ಹಿಂದೆ ಯಾರು, ಯಾರು ಇದ್ದಾರೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಲಿ
ಜೆ.ಎನ್.ಗಣೇಶ್ ಶಾಸಕರು ಕಂಪ್ಲಿ.
ಬಾಕ್ಸ್
ಟಿಕೆಟ್ ಆಕಾಂಕ್ಷಿ ಕೈವಾಡ:
ಈ ಅಕ್ಕಿ ದಂಧೆಯಲ್ಲಿ ಆಡಳಿತಾರೂಡ ಪಕ್ಷದ ಮುಖಂಡರು, ಮುಂಬರುವ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದ ನಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿಗಳದ್ದು, ಜೊತೆಗೆ ಅಕ್ರಮಗಳನ್ನು ನಿಯಂತ್ರಿಸಬೇಕಾದ ಪೊಲೀಸ್ ರ ಕೈವಾಡವೂ ಇದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.