ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.16 :- ಬಿಜೆಪಿ ಟಿಕೇಟ್ ವಂಚಿತ ಕೋಡಿಹಳ್ಳಿ ಭೀಮಣ್ಣ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ ತಿಳಿದಿದ್ದು ಕೂಡ್ಲಿಗಿ ಕ್ಷೇತ್ರದಿಂದ ಜೆಡಿಎಸ್ ಸ್ಪರ್ದಾಳು ಆಗಿ ಕಣಕ್ಕಿಳಿಯುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.
ಕೋಡಿಹಳ್ಳಿ ಭೀಮಣ್ಣ ಮೂಲತಃ ಹರಪನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರಾಗಿದ್ದು ವಿದ್ಯಾರ್ಥಿ ದೆಸೆಯಲ್ಲೇ ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಇವರು ನಂತರ ದಿನಗಳಲ್ಲಿ ಬಡವರ, ನೊಂದವರ, ಮಹಿಳೆಯರ, ವಿದ್ಯಾರ್ಥಿಗಳ ಪರ ನಿಂತು ಅನೇಕ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ನಿರಂತರ ತೊಡಗಿಕೊಂಡಿದ್ದ ಇವರು ಹರಪನಹಳ್ಳಿಗೆ 371ಜೆ ಸೇರ್ಪಡೆಗೊಳಿಸುವ ಹಾಗೂ ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡಿಸುವ ಹೋರಾಟದಲ್ಲಿ ಮುಂಚೂಣಿ ನಾಯಕರಲ್ಲಿ ಇವರು ಒಬ್ಬರಾಗಿದ್ದರು ಅಲ್ಲದೆ ಕೆಪಿಸಿಸಿ ಸದಸ್ಯರಾಗಿ, ಎಂ. ಪಿ ರವೀಂದ್ರ ಅವರ ಒಡನಾಡಿಯಾಗಿದ್ದ ಇವರು ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಯಾಗಿ ಸಂಘಟನಾತ್ಮಕವಾಗಿ ಗುರುತಿಸಿಕೊಂಡಿದ್ದ ಇವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಆಗಮಿಸಿ ಕಳೆದ ಬಾರಿ ಶ್ರೀರಾಮುಲು ಬಿಜೆಪಿಯಿಂದ ಟಿಕೆಟ್ ಕೊಡುವ ಮುನ್ಸೂಚನೆ ಇರುವಾಗ ಮೊಳಕಾಲ್ಮುರು ಮಾಜಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಇವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ನೀಡಿದ್ದರಿಂದ ಅಂದು ಅಸಮಾಧಾನಗೊಂಡರೂ ಮುಂದಿನ ಬಾರಿ ಅವಕಾಶ ಸಿಗುವುದೆಂಬ ಆಸೆಯಲ್ಲಿ ಅಂದು ಬಿಜೆಪಿಯ ಎನ್ ವೈ ಗೋಪಾಲಕೃಷ್ಣ ಗೆಲುವಿಗೂ ಮತ್ತು ಬಳ್ಳಾರಿ ಎಂಪಿ ದೇವೇಂದ್ರಪ್ಪ ಗೆಲುವಿಗೂ ಶ್ರಮಿಸಿದ್ದರು ಆದರೆ, ಈ ಬಾರಿಯ ಬಿಜೆಪಿ ಟಿಕೇಟ್ ನ ಪ್ರಮುಖ ಆಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಣ್ಣರವರಿಗೆ ಟಿಕೇಟ್ ಹಂಚಿಕೆಯಲ್ಲಿ ಈ ಸಲವೂ ಅನ್ಯಾಯವಾಗಿದ್ದು ಬಂಡಾಯದ ಕಹಳೆ ಮೊಳಗಿಸಿ ಕಮಲ ಬಿಟ್ಟು ತೆನೆ ಹೊತ್ತ ಮಹಿಳೆ ಪಕ್ಷದತ್ತ ಚಿತ್ತಹರಿಸಿ ಕಳೆದ ರಾತ್ರಿಯ ಜೆಡಿಎಸ್ ನ ಆಪ್ತ ವಲಯದ ಮಾಹಿತಿಯಂತೆ ಕೂಡ್ಲಿಗಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಸ್ಪರ್ಧಾಳುವಾಗಿ ಸ್ಪರ್ಧೆಗಿಳಿಯುವಲ್ಲಿ ಹೆಜ್ಜೆ ಇಟ್ಟಿದ್ದಾರೆಂಬ ಜೆಡಿಎಸ್ ಆಪ್ತವಲಯದಿಂದ ಖಚಿತ ಮಾಹಿತಿ ತಿಳಿದಿದೆ.ಈಗಾಗಲೇ ಬಿ ಫಾರಂ ಮಾಜಿ ಸಚಿವರ ಬಳಿ ಇದ್ದು ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಸುವ ಮಾಹಿತಿ ತಿಳಿದಿದೆ.