
ಚಾಮರಾಜನಗರ, ಮೇ.23:- ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಾಯಂಕಾಲ ಭೇಟಿ ನೀಡಿ, ಕ್ಷೇತ್ರದ ಮತದಾರರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು. ಕೊಳ್ಳೇಗಾಲ ಕ್ಷೇತ್ರವು ಮೂರು ತಾಲೂಕುಗಳನ್ನು ಒಳಗೊಂಡಿದೆ. ಸಂತೇಮಹರಳ್ಳಿ ಭಾಗವು ಚಾ.ನಗರಕ್ಕೆ, ಯಳಂದೂರು ತಾಲೂಕು ಪೂರ್ಣ ಹಾಗೂ ಕೊಳ್ಳೇಗಾಲ ತಾಲೂಕು ಭಾಗಶಃ ಕ್ಷೇತ್ರಕ್ಕೆ ಸೇರಿಕೊಂಡಿದೆ. ಹೀಗಾಗಿ ಆಯಾ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಕುಂದುಕೊರತೆಯನ್ನು ಬಗೆಹರಿಸಲು ಪ್ರತಿ ವಾರ ಜನ ಸಂಪರ್ಕ ಸಭೆಗಳನ್ನು ನಡೆಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಉತ್ತರ ಹಾಗೂ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಬಡವರ ಸೇವೆಯೇ ನನ್ನ ಗುರಿ: ಕಳೆದ 19 ವರ್ಷಗಳಿಂದ ಅಧಿಕಾರದಿಂದ ವಂಚಿತನಾಗಿದ್ದ ನನಗೆ ಕ್ಷೇತ್ರದ ಜನರು ನಿರೀಕ್ಷೆಗೂ ಮೀರಿ ಪ್ರಪಂಚ ಗೆಲುವು ತಂದು ಕೊಂಡಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳನ್ನು ನೀಡಿ, 59 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಕ್ಷೇತ್ರದ ಜನರ ಸಂಕಷ್ಟಗಳಿಗೆ ಭಾಗಿಯಾಗಬೇಕು. ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳನ್ನು ತಲುಪಿಸುವ ಜೊತೆಗೆ ಕ್ಷೇತ್ರದಲ್ಲಿ ಆಧ್ಯತೆ ಮೇರೆಗೆ ಮೂಲಸೌಲಭ್ಯಗಳನ್ನು ಕಲ್ಪಿಸಿ, ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದರು.
ಕಳೆದ 10 ವರ್ಷಗಳ ಹಿಂದೆ ಕ್ಷೇತ್ರದಲ್ಲಿ 2013ರÀಲ್ಲಿ ಜಯಣ್ಣ ಅವರು ಶಾಸಕರಾಗಿದ್ದಾಗ ನಡೆದಿದ್ದ ಅಭಿವೃದ್ದಿಪರ್ವ ಈಗ 2023ರ ನಂತರ ಆರಂಭವಾಗಲಿದೆ. ಅಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ನಾನು ಶಾಸಕನಾಗಿರುವ ಈ ಅವಧಿಯಲ್ಲಿಯೇ ನಮ್ಮ ಸರ್ಕಾರ ರಚನೆಯಾಗಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದು ಕ್ಷೇತ್ರದ ಜನರು ಹಾಗು ನನ್ನ ಸೌಭಾಗ್ಯವಾಗಿದೆ. ಕ್ಷೇತ್ರದ ಅಭಿವೃದ್ದಿಗೆ ಈ ಎಲ್ಲಾ ಅಂಶಗಳು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ದುಡಿಯುವ ಮೂಲಕ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ದಿಯತ್ತ ಕೊಂಡೊಯ್ಯೋಣ ಎಂದರು.
ಸಭೆಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಯೋಗೇಶ್, ಯಳಂದೂರು ಬ್ಲಾಕ್ ಅಧ್ಯಕ್ಷ ಹೊಂಗನೂರು ಚಂದ್ರು, ಮುಖಂಡರಾದ ಹೊಂಗನೂರು ಪುಟ್ಟಸ್ವಾಮಿ, ಬಾಗಳಿ ರೇವಣ್ಣ, ಉಮ್ಮತ್ತೂರು ಶಿವಣ್ಣ, ನಾಗಲಿಂಗನಾಯಕ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ಎಂ. ರವಿಶಂಕರಮೂರ್ತಿ, ಸಂತೇಮರಹಳ್ಳಿ ಮಹದೇವಪ್ರಸಾದ್ ಫಶಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಮೂರ್ತಿ, ಎಂಡಿಸಿಸಿ ಮಾಜಿ ನಿರ್ದೇಶಕ ಶಿವಶಂಕರ್, ಕೆ.ಎಂ. ನಾಗರಾಜು, ಹೊಮ್ಮ ರಾಮನಾಯಕ, ಉಮ್ಮತ್ತೂರು ಭಾಗ್ಯ, ಜನ್ನೂರು ವೀಣಾ, ಕಾವುದವಾಡಿ ಚಿನ್ನಸ್ವಾಮಿ, ಹೊಂಗನೂರು ಚೇತನ್ ಮೊದಲಾದವರು ಇದ್ದರು.