ಕೊಟ್ಟೂರು ಪ.ಪಂ.ನ ಉಳಿತಾಯ ಬಜೆಟ್ ಮಂಡನೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.16: ಪಟ್ಟಣ ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಬುಧವಾರದಂದು ಸರ್ವಸದಸ್ಯರ ಸಮ್ಮುಖದಲ್ಲಿ 2023-2024 ನೇ ಸಾಲಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ 20.91 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಭಾರತೀಯ ಸುಧಾಕರ್ ಪಾಟೀಲ್ ನೇತೃತ್ವದಲ್ಲಿ  ಬಜೆಟನ್ನು ಮಂಡನೆ ಮಾಡಲಾಯಿತು
ವಿವಿಧ ಮೂಲಗಳಿಂದ 28.89 ಕೋಟಿ ಆದಾಯ ಹಾಗೂ 22.41 ಕೋಟಿ ಖರ್ಚು ಅಂದಾಜಿಸಲಾಗಿದೆ. ಆಸ್ತಿ, ನೀರಿನ ತೆರಿಗೆ, ಮಳಿಗೆ ಬಾಡಿಗೆ ಉದ್ದಿಮೆ ಪರವಾನಿಗೆ ಶುಲ್ಕಗಳು, ಜಾಹಿರಾತು ಶುಲ್ಕ, ಖಾತಾ ಪುರವಣೆ, ವರ್ಗಾವಣೆ ಶುಲ್ಕಗಳು, ಕಟ್ಟಡ ಪರವಾನಿಗೆ ಮುಂತಾದವುಗಳಿಂದ ಅಂದಾಜು ಆದಾಯ  ಎಂದು ವಿವರಿಸಿದರು.
ಎಸ್ ಎಪ್ ಸಿ ಮುಕ್ತನಿಧಿ, 15 ನೇ ಹಣಕಾಸು ಅನುದಾನ ಮುಂತಾದವುಗಳಿಂದ 9.95 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು. ನೀರು, ರಸ್ತೆ, ಬೀದಿ ದೀಪ, ಉದ್ಯಾನವನ ನಿರ್ಮಾಣ, ಸಾರ್ವಜನಿಕ ಶೌಚಾಲಯ, ಕಚೇರಿ ಉಪಕರಣಗಳು, ನೈರ್ಮಲ್ಯ ವಿಭಾಗದ ದಾಸ್ತಾನು ಮುಂತಾದ ಸೌರ್ಕರ್ಯಗಳನ್ನು ಕಲ್ಪಿಸಲು 7.85 ಕೋಟಿ ಹಣ ಮೀಸಲಿಡಲಾಗಿದೆ ಎಂದರು.
ಸಭೆ ಆರಂಭವಾಗುತ್ತಿದ್ದಂತೆ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಜನತೆ ಬಳಲುತ್ತಿದ್ದರೂ ಮುಖ್ಯಾಧಿಕಾರಿಗಳು ಕಳೆದ ಎಂಟು ತಿಂಗಳಿಂದ ಸಭೆ ಕರೆಯದೆ ನಿರ್ಲಕ್ಷಿಸಿದ್ದಕ್ಕೆ ಸದಸ್ಯ ಈಶ್ವರಗೌಡ ಆಕ್ರೋಶ ವ್ಯಕ್ತಪಡಿಸಿದರು.
ಹಳೆಯ ವಸತಿ ವಿನ್ಯಾಸಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿ ಎಂದು ಸದಸ್ಯ ಬೋರವೆಲ್ ತಿಪ್ಪೇಸ್ವಾಮಿ ಹೇಳಿದರು. ಮುಖ್ಯಾಧಿಕಾರಿ ಉತ್ತರಿಸಿ ಬಡಾವಣೆಗಳನ್ನು ಪಟ್ಟಿಮಾಡಿ ಸೌಕರ್ಯಗಳನ್ನು ಕಲ್ಪಸಲು ಮುದಾಗುವುದಾಗಿ ತಿಳಿಸಿದರು.
ಜೋಳದ ಕೂಡ್ಲಿಗಿ ರಸ್ತೆಯಲ್ಲಿ ಬರುವ ಅನಧಿಕೃತವಾಗಿ ಒತ್ತುವರಿ ಜಾಗದಲ್ಲಿ ಕಟ್ಟಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ ಸೂಚಿಸಿದರು.
ಈಗಾಗಲೇ ಸುಮಾರು 1500 ಚದುರಡಿಗಳಷ್ಟು ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯಾದ ನಸುರುಲ್ಲಾ ತಿಳಿಸಿದರು.
ಒಟ್ಟಾರೆ ಸದಸ್ಯರ ವಾದ ವಿವಾದಗಳ ಮಧ್ಯ ಬಜೆಟ್  ಮಂಡನೆ ಮಾಡಲಾಯಿತು
ನಂತರ ಸುದ್ದಿಗೋಷ್ಠಿಯವರ ಎಸ್ಸಿ ಎಸ್ಟಿ ಅಂಗವಿಕಲಚೇತನಕ್ಕೆ ಅನುದಾನ ಮತ್ತು ನೇರ ಸಾಲ ಸ್ಲಂ ವಾರ್ಡ್ಗಳಲ್ಲಿ ಅನುದಾನವನ್ನು ಕಾಯ್ದಿರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಮುಖ್ಯ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಭಾರತಿ ಸುಧಾಕರಗೌಡ ಪಾಟೀಲ್, ಉಪಾಧ್ಯಕ್ಷ ಷಫೀ, ಸದಸ್ಯರಾದ ಬಾವಿಕಟ್ಟೆ ಶಿವಾನಂದ, ಕೆಂಗರಾಜ್, ಗಂಗಮ್ಮನಹಳ್ಳಿ ಸಿದ್ಧಯ್ಯ, ವೀಣಾ ವಿವೇಕಾನಂದಗೌಡ, ಕೊರಚರ ಹನುಮವ್ವ, ಶೈಲಜಾ ರಾಜೀವ, ಕಾಸಲ ಸಾವಿತ್ರಮ್ಮ ಪ್ರಕಾಶ್,ಇಂದಿರಾ ಭರಮಪ್ಪ, ಮರಬದ ಕೊಟ್ರೇಶ್, ಜಗದೀಶ್ ಮುಂತಾದವರು ಇದ್ದರು.