ಕೈಗಾರಿಕೆ ಸ್ಥಾಪಿಸದ ಜಮೀನನ್ನು ರೈತರಿಗೆ ಹಿಂದಕ್ಕೆ ನೀಡಲು ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.09: ಕೈಗಾರಿಕೆಗಳನ್ನು ಸ್ಥಾಪಿಸುವುದಾಗಿ ತಾಲೂಕಿನಲ್ಲಿ ಬಿಎಸ್ಎಎಲ್‌ ಕಂಪನಿ ಐಎಫ್ ಸಿಐ ಮತ್ತು ಕೆಐಎಡಿಬಿ ಮೂಲಕ‌ ಜಮೀನು ಸ್ವಾಧೀನಪಡಿಸಿಕೊಂಡು, ಕೈಗಾರಿಕೆ ಸ್ಥಾಪಿಸಿದೆ. ಶೇಷಾ ಗೋವಾ ಕಂಪನಿಗೆ ಮಾರಾಟ ಮಾಡಿದ್ದು ಅವರು ಸಹ ಕೈಗಾರಿಕೆ ಸ್ಥಾಪಿಸಿಲ್ಲ. ಆದ್ದರಿಂದ ಈ ಜಮೀನನ್ನು ರೈತರಿಗೆ ಹಿಂದಕ್ಕೆ ನೀಡಬೇಕೆಂದು ಭೂ ಸಂತ್ರಸ್ಥರು ಇಂದು ನಗರದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ  ಮನವಿ ಸಲ್ಲಿಸಿದ್ದಾರೆ.
ಭೂ ಸಂತ್ರಸ್ಥರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು  ಇಂದು ನಗರದ ನಾರಾಯಣರಾವ್ ಪಾರ್ಕ್ ನಿಂದ ಡಿಸಿ ಕಚೇರಿವರೆಗೆ ಸರ್ಕಾರ, ಕೆಐಡಿಬಿ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ ವಿರುದ್ದ ಘೋಷಣೆಗಳನ್ನು ಕೂಗುತ್ತ ಆಗಮಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಂದಾಜು 350 ಕ್ಕೂ ಹೆಚ್ಚು ರೈತರು 1995 ಮತ್ತು 1998 ರಲ್ಲಿ  1169 ಎಕರೆ  ಬಿಎಸ್ಎಎಲ್‌ ಸ್ಥಾಪನೆಗೆ  ಕೇವಲ ಮೊತ್ತಕ್ಕೆ ನೀಡಿತ್ತು. ನಂತರ ಐಎಫ್ ಸಿಐ ಮತ್ತು ಕೆಐಎಡಿಬಿ
ಶೇಷಾ ಗೋವಾ ಕಂಪನಿಗೆ ಈ ಜಮೀನು ಮಾರಾಟ ಮಾಡಿದೆ. ಅದು ಸಹ  ಕೈಗಾರಿಕೆ ಆರಂಭಿಸಲಿಲ್ಲ. ಒಪ್ಪಂದದಂತೆ ಕೈಗಾರಿಕೆ ನಿರ್ಮಾಣ ಮಾಡದೇ ಒಪ್ಪಂದ ಉಲ್ಲಂಘಿಸಿದ್ದಾರೆ. ಅದಕ್ಕಾಗಿ
ಸ್ವಾಧೀನ ಪಡಿಸಿಕೊಂಡ  ಜಮೀನುಗಳನ್ನು ಮೂಲ ರೈತರಿಗೆ ಹಿಂದಕ್ಕೆ  ನೀಡಬೇಕೆಂಬುದು ಸಂತ್ರಸ್ಥರ ಬೇಡಿಕೆಯಾಗಿದೆ.
ರೈತರಿಂದ ಜಮೀನು ಪಡೆದು ಕೈಗಾರಿಕೆ ಸ್ಥಾಪನೆ ಮಾಡದೇ ಇರುವುದು ಆರ್ಥಿಕ ಬೆಳವಣಿಗೆಗೂ ವಿರೋಧಿಯಾಗಿದೆ. ಜೊತೆಗೆ ಜಮೀನು ನೀಡಿದವರಿಗೂ ಉದ್ಯೋಗ ಇಲ್ಲದೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಕೈಗಾರಿಕೆ ಸ್ಥಾಪನೆ ಮಾಡದಿರುವ ಕಾರಣ ಸ್ವಾಧೀನ ಪಡೆಸಿಕೊಂಡ ಜಮೀನನ್ನು ರೈತರಿಗೆ ಪಾವಾಸ್ ನೀಡಬೇಕಿದೆ.
ಸರಕಾರ ಅಥವಾ ಕೆಐಏಡಿಬಿ ರೈತರ  ಜಮೀನುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದಾದರೇ.  ಅಲ್ಲಿ ಯಾವುದೇ ಕಂಪನಿ ಕೈಗಾರಿಕೆ ನಿರ್ಮಾಣ ಮಾಡುವ ವರ್ಷದಲ್ಲಿ ಹೊಸ ಭೂ ಬೆಲೆ ನಿಗಧಿಪಡಿಸಿ ನೀಡಬೇಕು. ಅದೇ ರೀತಿ ಈ 28 ವರ್ಷಗಳಲ್ಲಿ ಆದ ಉದ್ಯೋಗ ಮತ್ತಿತರ ನಷ್ಟಕ್ಕೆ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂ. ಪರಿಹಾರ ಒದಗಿಸಬೇಕು.
ಸಮಾಜ ಸಂಸದ ಕೆ.ಸಿ.ಕೊಂಡಯ್ಯ ಬಿಎಸ್‌ಎಎಲ್ ಕಂಪನಿಗೆಂದು ರೈತರಿಂದ ಜಮೀನನ್ನು ಕಡಿಮೆ ಧರದಲ್ಲಿ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸದೇ ರೈತರಿಗೆ ವಂಚನೆ ಮಾಡಿದ್ದಾರೆ.  ಇಡೀ ಪ್ರಕರಣವನ್ನು ಲೋಕಾಯುಕ್ತ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ಕೆಐಏಡಿಬಿ  ಅಧಿಕಾರಿಗಳ ಶಾಮೀಲುತನವನ್ನು ಪ್ರತ್ಯೇಕವಾಗಿ ತನಿಖೆ ನಡೆಸಬೇಕು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು. ಮತ್ತು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು
ಸಂಘಟನೆಗಳ ಮುಖಂಡರುಗಳಾದ ಯು.ಬಸವರಾಜ್, ಜೆ.ಸತ್ಯಬಾಬು, ಶಿವಶಂಕರ್, ಅಯ್ಯನಗೌಡ, ಚಂದ್ರಕುಮಾರಿ, ದೇವೇಂದ್ರಗೌಡ, ಸೋಮಶೇಖರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.