(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಯಾವುದೇ ಕಂಪನಿಯು ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಒಪ್ಪಂದದಂತೆ ಕೈಗಾರಿಕೆ ನಿರ್ಮಾಣ ಮಾಡದೇ ಒಪ್ಪಂದ ಉಲ್ಲಂಘಿಸಿದವರು ಸ್ವಾಧೀನ ಪಡಿಸಿಕೊಂಡ ಜಮೀನುಗಳನ್ನು ಮೂಲ ರೈತರಿಗೆ ಹಿಂದಕ್ಕೆ ನೀಡಬೇಕು ಎಂದು ಭೂ ಸಂತ್ರಸ್ಥರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಆಗ್ರಹಿಸಿವೆ.
ಸಂಘಟನೆಗಳ ಮುಖಂಡರುಗಳಾದ ಯು.ಬಸವರಾಜ್, ಜೆ.ಸತ್ಯಬಾಬು, ಶಿವಶಂಕರ್, ಅಯ್ಯನಗೌಡ, ಚಂದ್ರಕುಮಾರಿ, ದೇವೇಂದ್ರಗೌಡ, ಸೋಮಶೇಖರ ಮೊದಲಾದವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ರೈತರಿಂದ ಜಮೀನು ಪಡೆದು ಕೈಗಾರಿಕೆ ಸ್ಥಾಪನೆ ಮಾಡದೇ ಇರುವುದು ಆರ್ಥಿಕ ಬೆಳವಣಿಗೆಗೂ ವಿರೋಧಿಯಾಗಿದೆ. ಜೊತೆಗೆ ಜಮೀನು ನೀಡಿದವರಿಗೂ ಉದ್ಯೋಗ ಇಲ್ಲದೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಕೈಗಾರಿಕೆ ಸ್ಥಾಪನೆ ಮಾಡದಿರುವ ಕಾರಣ ಸ್ವಾಧೀನ ಪಡೆಸಿಕೊಂಡ ಜಮೀನನ್ನು ರೈತರಿಗೆ ಪಾವಾಸ್ ನೀಡಬೇಕು ಎಂದರು.
ಸರಕಾರ ಅಥವಾ ಕೆಐಏಡಿಬಿ ರೈತರ ಜಮೀನುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದಾದರೇ. ಅಲ್ಲಿ ಯಾವುದೇ ಕಂಪನಿ ಕೈಗಾರಿಕೆ ನಿರ್ಮಾಣ ಮಾಡುವ ವರ್ಷದಲ್ಲಿ ಹೊಸ ಭೂ ಬೆಲೆ ನಿಗದಿಸಿ ನೀಡಬೇಕು. ಅದೇ ರೀತಿ ಈ 28 ವರ್ಷಗಳಲ್ಲಿ ಆದ ಉದ್ಯೋಗ ಮತ್ತಿತರ ನಷ್ಟಕ್ಕೆ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂ. ಪರಿಹಾರ ಒದಗಿಸಬೇಕು.
ಅಂದಾಜು 350 ಕ್ಕೂ ಹೆಚ್ಚು ರೈತರು 1995 ಮತ್ತು 1998 ರಲ್ಲಿ 1169 ಎಕರೆ ಬಿಎಸ್ಎಎಲ್ ಸ್ಥಾಪನೆಗೆ ಕೇವಲ ಮೊತ್ತಕ್ಕೆ ನೀಡಿತ್ತು. ನಂತರ ಐಎಫ್ ಸಿಐ ಮತ್ತು ಕೆಐಎಡಿಬಿ
ಶೇಷಾ ಗೋವಾ ಕಂಪನಿಗೆ ಈ ಜಮೀನು ಮಾರಾಟ ಮಾಡಿದೆ. ಅದು ಸಹ ಕೈಗಾರಿಕೆ ಆರಂಭಿಸಲಿಲ್ಲ. ಅದಕ್ಕಾಗಿ ಈ ಕಂಪನಿಗಳ ಮಾಲೀಕರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಮತ್ತು ಕೆಐಏಡಿಬಿ ಆಸ್ತಿಗಳನ್ನು ಜಪ್ತಿಮಾಡಿ ಒದಗಿಸಬೇಕು. ಅದನ್ನು ಮಾಡಲು ಸರಕಾರಕ್ಕೆ ಸಾಧ್ಯವಾಗದಿದ್ದರೇ ರಾಜ್ಯ ಸರಕಾರವೇ ಒದಗಿಸಬೇಕು.
ಬಿಎಸ್ಎಎಲ್ ಕಂಪನಿಯ ವಂಚನೆಯ ಇಡೀ ಪ್ರಕರಣವನ್ನು ಲೋಕಾಯುಕ್ತ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ಕೆಐಏಡಿಬಿ ಅಧಿಕಾರಿಗಳ ಶಾಮೀಲುತನವನ್ನು ಪ್ರತ್ಯೇಕವಾಗಿ ತನಿಖೆ ನಡೆಸಬೇಕು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು. ಮತ್ತು ತಬಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.