
ಬೆಂಗಳೂರು,ಮಾ.೧೪- ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ ವೊಂದರ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಸಾವನ್ನಪ್ಪಿರುವುದು ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಅರ್ಚನಾಳನ್ನು ಆಕೆಯ ಗೆಳೆಯ ಆದೇಶ್ ಅಪಾರ್ಟ್ಮೆಂಟ್ ನ ನಾಲ್ಕನೆಯ ಮಹಡಿಯ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಕೋರಮಂಗಲ ಪೊಲೀಸರು ಅರ್ಚನಾಳ ಪ್ರಿಯಕರ ಆದೇಶ್ ವಿರುದ್ಧ ಐಪಿಸಿ ೩೦೨ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿ ತೀವ್ರ ಶೋಧ ಕೈಗೊಂಡಿದ್ದಾರೆ.
ಹಿಮಾಚಲದ ಮೂಲದ ಅರ್ಚನಾ ಹಾಗೂ ಕೇರದ ಮೂಲದ ಆದೇಶ್ ಡೇಟಿಂಗ್ ಅಪ್ನಲ್ಲಿ ಪರಿಚಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಏರ್ ಲೈನ್ಸ್ನಲ್ಲಿ ಗಗನಸಖಿಯಾಗಿದ್ದರೆ ಆದೇಶ್ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಹೀಗೆ ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ನಗರಕ್ಕೆ ಆಗಮಿಸಿದ್ದಳು.
ಆದರೆ ಮಾರ್ಚ್ ೧೧ರಂದು ಅರ್ಚನಾ ಆದೇಶ್ ತಂಗಿದ್ದ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಮೃತಪಟ್ಟಿದ್ದಳು. ಬಳಿಕ ಆದೇಶ್ ನಶೆಯಲ್ಲಿ ಬಿಲ್ದಿಂಗ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆಗೆ ಕರೆ ಮಾಡಿ ಹೇಳಿದ್ದ.
ಅಲ್ಲದೇ ಪೊಲೀಸರಿಗೂ ಇದೇ ಹೇಳಿದ್ದ. ಆದರೆ ಈ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಬಂದಿದ್ದು, ಇದು ಆಕಸ್ಮಿಕವಾಗಿ ಬಿದ್ದಿರುವುದಲ್ಲ. ಆದೇಶ್ ಆಕೆಯನ್ನು ಮೇಲೆಂದ ತಳ್ಳಿದ್ದಾನೆ ಎಂದು ದೂರು ನೀಡಿದ್ದರು.
ಅರ್ಚನಾಳನ್ನು ಕೊಲೆ ಮಾಡುವ ಉದ್ದೇಶದಿಂದ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾರೆ ಎಂದು ಅರ್ಚನಾಳ ತಂದೆ ದೇವರಾಜ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ದಾಖಲಿಸಿಕೊಂಡು ತನಿಖೆ ನಡೆದ ಪೊಲೀಸರಿಗೆ ಮೇಲ್ನೋಟಕ್ಕೆ ಆದೇಶ್ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಆದೇಶ್ನನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ಮಾಡಿದಗ ಇಬ್ಬರ ನಡುವಿನ ಗಲಾಟೆಯ ಅಸಲಿ ಕಹಾನಿ ಬಯಲಿಗೆ ಬಂದಿದೆ.
ಐಲ್ ಎಂಬ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಮದುವೆಯಾಗುವಂತೆ ಅರ್ಚನಾ ಪೀಡಿಸುತ್ತಿದ್ದಳು. ತನ್ನ ಮನೆಯಲ್ಲಿ ಮದುವೆ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಮದುವೆ ಬಗ್ಗೆ ಮಾತಾಡುವಂತೆ ಒತ್ತಾಯಿಸುತ್ತಿದ್ದಳು. ಆದರೆ ಆದೇಶ್ ಮೂರು ತಿಂಗಳಿಂದ ಹಲವು ಸಬೂಬು ನೀಡಿ ಕಾಲಹರಣ ಮಾಡಿದ್ದ. ಇನ್ನು ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಗಗನಸಖಿ ಅರ್ಚನಾ, ಮದುವೆಯಾಗಲು ತೀವ್ರ ಒತ್ತಡ ಹೇರಿದ್ದಳು. ಈ ವಿಚಾರವಾಗಿ ಮಾರ್ಚ್ ೧೧ ರ ರಾತ್ರಿ ಇಬ್ಬರ ನಡುವೆ ಜೋರು ಗಲಾಟೆ ಆಗಿದ್ದು, ಈ ವೇಳೆ ಅರ್ಚನಾ ಮದುವೆಯಾಗದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಳು.
ಇದರಿಂದ ಕೋಪಗೊಂಡ ಆದೇಶ್?, ಆಕೆಯನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.