
ಬೀದರ, ಆ.3:ಕೆಳಹಂತದ ಕಾಮಗಾರಿ ಹಾಗೂ ಯೋಜನೆಗಳ ಜಾರಿಯ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡುವದರಿಂದ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಹೊಂದಬಹುದು ಆದರಿಂದ ಜಿಲ್ಲೆಯ ಪ್ರಗತಿಗಾಗಿ ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿಕೊಂಡು ಪ್ರತಿವಾರ ಒಂದೊಂದು ಕ್ಷೇತ್ರದ ಪ್ರಗತಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬೇಕು ಎಂದು ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮುನೀಶ್ ಮೌದ್ಗಿಲ್ ಹೇಳಿದರು.
ಅವರು ಬುಧವಾರ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ನಡೆದ ಜೂನ್ 2023ರ ಮಾಹೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಳ ಹಂತದ ಅಧಿಕಾರಿಗಳು ಯೋಜನೆ ಜಾರಿಯಲ್ಲಿ ಇರುವ ನೂನ್ಯತೆಗಳನ್ನು ತಮ್ಮ ಹಂತದಲ್ಲಿಯೆ ಇಟ್ಟುಕೊಳ್ಳದೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಇದರಿಂದ ನೂನ್ಯತೆಗಳನ್ನು ಸರಿಪಡಿಸಬಹುದು. ಅಧಿಕಾರಿಗಳು ಸಹ ಕೆಳ ಹಂತದ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಬೇಕು ಅಂದಾಗ ಜಿಲ್ಲೆಯು ಅಭಿವೃದ್ಧಿಯಾಗುತ್ತದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 2,54,211 ಅರ್ಜಿ ಸಲ್ಲಿಕೆಯಾಗಿವೆ, 1500 ಅರ್ಜಿಗಳು ಆಧಾರ ಸರ್ವರ್ ಸಮಸ್ಯೆ ಹಾಗೂ ಆಧಾರ ಲಿಂಕ್ ಮಾಡದ ಬ್ಯಾಂಕ್ ಅಕೌಂಟ್ ನಂಬರ ನೀಡದಿರುವದರಿಂದ ಪೆಡಿಂಗ್ನಲ್ಲಿವೆ. ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಹೆಚ್ಚುವರಿ ಅಕ್ಕಿಯ ಹಣವನ್ನು ಪಾವತಿ ಮಾಡಲಾಗಿದೆ ಯಾರು ತಮ್ಮ ಕುಟುಂಬದ ಮುಖ್ಯಸ್ಥರ ಅಕೌಂಟ್ ನಂಬರ ಸರಿಯಾಗಿ ನೀಡಿಲ್ಲವೋ ಅವರಿಗೆ ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆ ಕೊಡಲು ಮಾಹಿತಿ ನೀಡಲಾಗಿದೆ. ಗೃಹ ಜ್ಯೋತಿ ಅಡಿ ಜಿಲ್ಲೆಯಲ್ಲಿ 3.67 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಶಕ್ತಿ ಯೋಜನೆಯಡಿ ದಿನದಿತ್ಯ ಜಿಲ್ಲೆಯಲ್ಲಿ 93 ಸಾವಿರ ಮಹಿಳೆಯರು ಸಂಚರಿಸುತ್ತಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿ ಕಾರ್ಯದರ್ಶಿಗಳು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುವಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇತ್ತಿಚೆಗೆ ತೊಗರಿ ಬೆಳೆಗೆ ನೆಟೆ ರೋಗ ತಗುಲಿ ಬೆಳೆ ಹಾನಿಗೆ ಒಳಗಾದ ರೈತರಲ್ಲಿ ಕೆಲವರಿಗೆ ಇಗಾಗಲೇ ಮೊದಲ ಕಂತಿನಲ್ಲಿ ಪರಿಹಾರ ನೀಡಲಾಗಿದೆ ಉಳಿದ ರೈತರಿಗೆ ಮುಂದಿನ ಕಂತಿನಲ್ಲಿ ಪರಿಹಾರ ಒದಗಿಸಲಾಗುವುದು ಹಾಗೂ ಅತೀವೃಷ್ಠಿಯಿಂದ ಹಾನಿಗೆ ಒಳಗಾದ ಬೆಳೆಗಳ ಪರಿಹಾರಕ್ಕಾಗಿ ದಾಖಲಿಕರಣ ಮಾಡಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಿತೇಂದ್ರನಾಥ ಸೂಗುರ ಸಭೆಯ ಗಮನಕ್ಕೆ ತಂದರು ಕಾರ್ಯದರ್ಶಿಗಳು ರೈತರಿಗೆ ತೊಂದರೆಯಾಗದಂತೆ ಹಾನಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಎಲ್ಲರಿಗೂ ಪರಿಹಾರ ಸಿಗುವಂತೆ ಮಾಡಬೇಕೆಂದು ಸೂಚನೆ ನೀಡಿದರು.
ಬೀದರ ತಾಲ್ಲೂಕಿನ ಬರಿದಾಬಾದ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸಾರ್ವಜನಿಕರು ಅಸ್ವÀಸ್ಥರಾದ ಘಟನೆ ನಡೆದಿದೆ ಇದಕ್ಕೆ ಜೆಜೆಎಂ ಕಾಮಗಾರಿ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಗ್ರಾಮದಲ್ಲಿ ಘಟನೆ ನಡೆಯುವ ಮುಂಚೆಯೆ ಭಾಲ್ಕಿ ತಾಲ್ಲೂಕಿನ ಕರಕ್ಯಾಳ ಗ್ರಾಮದಲ್ಲಿ ಇಂತಹ ಘಟನೆ ನಡೆದಿತ್ತು ಆಗಲೇ ಪಿಡಿಓಗಳಿಗೆ ಇಂತಹ ಘಟನೆಗಳು ನಡೆಯದಂತೆ ಎಚ್ಚೆತ್ತುಕೊಳ್ಳಿ ಎಂದು ಸೂಚನೆ ನೀಡಲಾಗಿತ್ತು. ಬರಿದಾಬಾದನಲ್ಲಿ ಜುಲೈ 25 ರಂದು ಕಲುಷಿತ ನೀರು ಕುಡಿದು ಸಾರ್ವಜನಿಕರು ಅಸ್ವಸ್ಥರಾದ ಘಟನೆ ನಡೆದಾಗ ಪ್ರಾಥಾಮಿಕ ಹಂತದಲ್ಲಿಯೆ ಬಗೆಹರಿಸಲು ಪಿಡಿಓ ಪ್ರಯತ್ನಿಸಿದ್ದಾರೆ ಮೇಲಧಿಕಾರಿಗಳ ಗಮನಕ್ಕೆ ತರದೆ ಇರುವದರಿಂದ ವಿಳಂಬವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಮಾಹಿತಿ ನೀಡಿದರು ಇಂತಹ ಘಟನೆ ನಡೆಯದಂತೆ ಮುಂಜಾಗೃತಿ ವಹಿಸಿ ಎಂದು ಕಾರ್ಯದರ್ಶಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಬೀದರ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೊಲಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.