ಕೆರೆಗೆ ಬಿದ್ದ ಕಾರು ಒಂದೇ ಕುಟುಂಬದ ಮೂವರ ಸಾವು

ತುಮಕೂರು/ಸಿರಾ, ಅ. ೨೯- ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆಂದು ಹೊರಟ್ಟಿದ್ದವರ ಕಾರು ಚಾಲನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಸಿರಾ ತಾಲ್ಲೂಕಿನ ರಾಮಲಿಂಗಾಪುರ ಕೆರೆಯಲ್ಲಿಂದು ಮುಂಜಾನೆ ನಡೆದಿದೆ.
ಮೃತರು ಸಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಸಮೀಪದ ವೀರಾಪುರ ಗ್ರಾಮದವರಾಗಿದ್ದು, ದೊಡ್ಡಣ್ಣ, ಸಣ್ಣಮ್ಮ ಹಾಗೂ ಇವರ ಪುತ್ರಿ ಯಮುನಾ ಎಂದು ಗುರುತಿಸಲಾಗಿದೆ. ಇವರನ್ನು ಕಾರಿನಲ್ಲಿ ಧರ್ಮಸ್ಥಳಕ್ಕೆ ಕರೆದೊಯ್ಯುತ್ತಿದ್ದ ಅಳಿಯ ಹಾಗೂ ಸಿರಾದಲ್ಲಿರುವ ಭರಣಿ ಮೆಡಿಕಲ್ ಸ್ಟೋರ್ ಮಾಲೀಕ್ ಪ್ರದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ ಪ್ರದೀಪ್ ತನ್ನ ಪತ್ನಿ ಯಮುನಾ, ಮಾವ ದೊಡ್ಡಣ್ಣ ಹಾಗೂ ಅತ್ತೆ ಸಣ್ಣಮ್ಮ ಅವರನ್ನು ಕಾರಿನಲ್ಲಿ ಕರೆದುಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದರು. ಇದಕ್ಕೂ ಮುನ್ನ ಇವರು ತೆರಳುವ ಮಾರ್ಗದಲ್ಲೇ ಇರುವ ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ ಮಣ್ಣಮ್ಮ ದೇವಿ ದರ್ಶನ ಪಡೆದು ತೀರ್ಮಾನಿಸಿ ಮಣ್ಣಮ್ಮ ದೇವಾಲಯಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಕಾರು ರಾಮಲಿಂಗಾಪುರ ಕೆರೆ ಏರಿ ಮೇಲೆ ಮಣ್ಣಮ್ಮ ದೇವಿ ದೇವಾಲಯಕ್ಕೆ ತೆರಳುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಬಿದ್ದಿದೆ. ಈ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ಅಳಿಯ ಪ್ರದೀಪ್ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೆರೆಯ ದಡದಲ್ಲಿ ಕುಳಿತಿದ್ದರು ಎಂದು ಹೇಳಲಾಗಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ರಾಮಲಿಂಗಾಪುರ ಹಾಗೂ ವೀರಾಪುರ ಗ್ರಾಮಸ್ಥರು, ಸಿರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಮೂವರ ಶವಗಳನ್ನು ಹೊರ ತೆಗೆದಿದ್ದಾರೆ. ಆದರೆ ಕಾರು ಇನ್ನು ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಸಿರಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಲೆ ಶಂಕೆ: ಗ್ರಾಮಸ್ಥರ ಆರೋಪ
ರಾಮಲಿಂಗಾಪುರ ಕೆರೆಗೆ ಉರುಳಿ ಬಿದ್ದಿರುವ ಕಾರಿನಲ್ಲಿದ ನಾಲ್ವರ ಪೈಕಿ ಮೂವರು ಮೃತಪಟ್ಟು, ಅಳಿಯ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಬಗ್ಗೆ ವೀರಾಪುರ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಇದು ಕೊಲೆ ಇರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಅತ್ತೆ, ಮಾವ ಹಾಗೂ ಪತ್ನಿ ಸಾವನ್ನಪ್ಪಿದ್ದಾರೆ. ಅಳಿಯ ಇದರಿಂದ ಪಾರಾಗಿರುವುದರ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಅಪಘಾತ ಪ್ರಕರಣದ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.