
ವಿಜಯಪುರ, ಮೇ ೨೧: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆ.ಎಚ್ ಮುನಿಯಪ್ಪ ಅವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ಪ್ರಾಪ್ತಿಯಾಗಿದ್ದು, ಇದುವರೆವಿಗೂ ಕ್ಷೇತ್ರದಲ್ಲಿ ಯಾರೇ ಶಾಸಕರಾದರೂ ಬೇರೆ ಬೇರೆ ಸರ್ಕಾರ ಇದ್ದು, ಸರ್ಕಾರ ಹಾಗೂ ಶಾಸಕರು ವೈರುಧ್ಯ ರೀತಿಯಲ್ಲಿ ಇರುತ್ತಿದ್ದುದು, ಇದೀಗ ಕಾಂಗ್ರೆಸ್ನ ಶಾಸಕ ಕೆಎಚ್ ಮುನಿಯಪ್ಪ ಆಯ್ಕೆಯಾಗಿದ್ದು ಸರ್ಕಾರವು ಸಹ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಹಾಗೂ ಕೆಎಚ್ ಮುನಿಯಪ್ಪ ರವರು ಹಿರಿಯ ಕಾಂಗ್ರೆಸ್ ಮುಖಂಡರು ಆಗಿರುವುದರಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಲಿರುವುದು ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ ಸತೀಶ್ ಕುಮಾರ್ ತಿಳಿಸಿದರು.
ಅವರು ಇಲ್ಲಿನ ಅಂಕತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಮತ್ತು ದೇವನಹಳ್ಳಿ ಕ್ಷೇತ್ರದ ಶಾಸಕರಾದ ಕೆಎಚ್ ಮುನಿಯಪ್ಪ ರವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭಿಮಾನಿಗಳೊಂದಿಗೆ ಜಯಕಾರಗಳೊಂದಿಗೆ, ಪಟಾಕಿಗಳನ್ನು ಸಿಡಿಸಿ, ಲಾಡುಗಳನ್ನು ಸಾರ್ವಜನಿಕರಿಗೆ ವಿತರಿಸಿ ವರದಿಗಾರರನ್ನು ಕುರಿತು ಮಾತನಾಡುತ್ತಿದ್ದರು.
ದೇವನಹಳ್ಳಿ ಕ್ಷೇತ್ರದ ಅದೃಷ್ಟ;. ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ನಿರೀಕ್ಷೆಯಂತೆಯೇ ಕೆಎಚ್ ಮುನಿಯಪ್ಪ ರವರು ಮೊದಲ ಹಂತದಲ್ಲಿಯೇ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ದೇವನಹಳ್ಳಿ ಕ್ಷೇತ್ರಕ್ಕೆ ಲಾಟರಿ ಹೊಡೆದಂತೆ ಆಗಿದೆ ಎಂದು ಇನ್ನೇನಿದ್ದರೂ ದೇವನಹಳ್ಳಿ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಮೂಲ ಮಂತ್ರ ಆಗಿರುತ್ತದೆ ಎಂದು ತಿಳಿಸಿದರು
ಪಟ್ಟಣದ ೧೨ನೇ ವಾರ್ಡಿನ ಪುರಸಭಾ ಸದಸ್ಯ ನಂದ ಕುಮಾರ್ ರವರು ಮಾತನಾಡಿ ಕಳೆದ ೭೫ ವರ್ಷಗಳಿಂದ ದೇವನಹಳ್ಳಿ ತಾಲೂಕು ಅಭಿವೃದ್ಧಿ ಪಥದಲ್ಲಿ ಹಿಂದುಳಿದಿದ್ದು ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಅವುಗಳ ಈಡೇರಿಕೆಯೊಂದಿಗೆ ಸರ್ಕಾರ ತಮ್ಮ ಪ್ರಣಾಳಿಕೆಯೊಂದಿಗೆ ನೀಡಿದ್ದ ೫ ಗ್ಯಾರಂಟಿಗಳನ್ನು ಕೂಡ ಈಡೇರಿಸಲು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯರುಗಳಾದ ಮುನಿ ಕೃಷ್ಣಪ್ಪ, ಸಂಪತ್ ಕುಮಾರ್, ಹರೀಶ್, ಕಾಂಗ್ರೆಸ್ ಮುಖಂಡರುಗಳಾದ ಮಧು, ಸೈಫುಲ್ಲಾ, ಕಾವೇರಿ ಮುನಿರಾಜಪ್ಪ, ಮರವೇ ಕೆಂಪಣ್ಣ, ಆರ್ ಎಂ ಸಿಟಿ ಮಂಜುನಾಥ್, ಬೇಕರಿ ಆನಂದಪ್ಪ ಮುಂತಾಗಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.