
ಸಂಜೆವಾಣಿ ವಾರ್ತೆ
ಗಂಗಾವತಿ : ಇಂದು ನಗರದ ಕನಕಗಿರಿ ರಸ್ತೆಯಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಜನಸಾಮಾನ್ಯರಿಗೆ ಪಕ್ಷದ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಭೀಮಾಶಂಕರ ಪಾಟೀಲ್ ಉದ್ಘಾಟಿಸಿದರು.
ನಂತರ ಭೀಮಾಶಂಕರ ಪಾಟೀಲ್ ಮಾತನಾಡಿ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೆ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಹುಟ್ಟು ಹಾಕುವ ಮೂಲಕ ಗಾಲಿ ಜನಾರ್ಧನ ರೆಡ್ಡಿಯವರು ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಅತಿ ಕಡಿಮೆ ಸಮಯದಲ್ಲಿ ಪಕ್ಷದ ಹೆಸರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಪಕ್ಷದ ವಿಚಾರಧಾರೆಗಳನ್ನು ಮತ್ತು ನಿಲುವುಗಳನ್ನು ಒಪ್ಪಿಕೊಂಡು ದಿನದಿಂದ ದಿನಕ್ಕೆ ಸಾವಿರಾರು ಜನರು ಸ್ವ ಇಚ್ಚೆ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಗಂಗಾವತಿ ಕೇಂದ್ರ ಕಚೇರಿ ಯಿಂದಲೇ ಇಡೀ ರಾಜ್ಯಕ್ಕೆ ಪಕ್ಷದ ಚಟುವಟಿಕೆಗಳನ್ನು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯದಿಂದ ಗಂಗಾವತಿಗೆ ಬರುವಂತಹ ಸಾವಿರಾರು ಅಭಿಮಾನಿಗಳು ಅಗಮಿಸುತ್ತಿದ್ದು ಅವರ ಅವಶ್ಯಕತೆಗಳು ಹಾಗೂ ಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದನೆ ನೀಡಲು ಮತ್ತು ಪಕ್ಷದ ಚಟುವಟಿಕೆಗಳ ಮಾಹಿತಿ ನೀಡಲು ಚಾಲನೆ ನೀಡಲಾಗಿದೆ ಎಂದರು. ಸಂಪರ್ಕ ಕೇಂದ್ರ ಕಚೇರಿಯನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆ 6366812104/6366812105.
ಈ ಸಂದರ್ಭದಲ್ಲಿ ಗಂಗಾವತಿ ಸೋಮವಂಶಿಯ ಕ್ಷತ್ರಿಯ ಸಮಾಜದ ಹಿರಿಯ ಮುಖಂಡ ಧಲಭಂಜನ್, ಗ್ರಾಮೀಣ ಘಟಕದ ಉಪಾಧ್ಯಕ್ಷ ಆನಂದಗೌಡ, ಹಿಂದುಳಿದ ವರ್ಗದ ನಗರ ಘಟಕ ಅಧ್ಯಕ್ಷ, ಕಾರ್ಯದರ್ಶಿಗಳಾದ ಪ್ರಸಾದ ಹಟ್ಲಿ, ಬಸವರಾಜ್ ಮಾಂತಗೊಂಡ ಸಂತೋಷ್ ದಾಸನಾಳ್ ಮತ್ತು ಪಕ್ಷದ ಹಿರಿಯ ಮುಖಂಡರು ಮತ್ತು ಕಚೇರಿ ಸಿಬ್ಬಂದಿ ಉಪಸ್ಥಿತಿಯಿದ್ದರು.