
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 4 :- ಮೇಯಲು ಹೋಗಿ ಮನೆಕಡೆಗೆ ಹೊರಟಿದ್ದ ಕುರಿಹಿಂಡಿನ ಮೇಲೆ ಚಿತ್ರದುರ್ಗ ಕಡೆಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾದ ಪರಿಣಾಮ ಸುಮಾರು 300 ಕುರಿಗಳಲ್ಲಿ 21ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು 5 ಕುರಿಗಳಿಗೆ ಗಾಯವಾಗಿರುವ ಘಟನೆ ತಾಲೂಕಿನ ಇಮಡಾಪುರ ಬಳಿಯ ಹೈವೇ 50ರ ರಸ್ತೆಯಲ್ಲಿ ಬುಧವಾರ ಸಂಜೆ ಜರುಗಿದೆ.
ಇಮಡಾಪುರದ ಸಣ್ಣಕೆಂಚಪ್ಪ ಹಾಗೂ ಇತರರಿಗೆ ಸೇರಿದ ಸುಮಾರು 300ಕುರಿಗಳ ಹಿಂಡನ್ನು ಮೇಯಿಸಿಕೊಂಡು ಮನೆಕಡೆಗೆ ಹೊಡೆದುಕೊಂಡು ಹೋಗುತ್ತಿರುವಾಗ್ಗೆ ಚಿತ್ರದುರ್ಗ ಕಡೆಯಿಂದ ಹೊಸಪೇಟೆ ಕಡೆಗೆ ಹೋಗುತ್ತಿದ್ದ ಇನೋವಾ ಕಾರಿನ ಚಾಲಕ ಬೆಂಗಳೂರಿನ ರೆಹಮತ್ ಉಲ್ಲಾ ಎಂಬಾತನು ಕಾರನ್ನು ವೇಗವಾಗಿ ಚಲಾಯಿಸಿ ಕೊಂಡು ಹೋಗಿ ಕುರಿಹಿಂಡಿಗೆ ಡಿಕ್ಕಿಹೊಡೆಸಿದ ಪರಿಣಾಮ 21ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು 5ಕುರಿಗಳಿಗೆ ಗಾಯಗಳಾಗಿವೆ ಕಾರು ಜಖಂಗೊಂಡಿದೆ. ಕಾರಿನ ಚಾಲಕನ ವಿರುದ್ಧ ಇಮಡಾಪುರ ಸಣ್ಣ ಕೆಂಚಪ್ಪ ನೀಡಿದ ದೂರಿನಂತೆ ಹೊಸಹಳ್ಳಿ ಎಎಸ್ ಐ ದುರುಗಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.