ಕಾಲ್ ವಿವರ ಸಂಗ್ರಹ ಎಂಬಿಪಾ ದೂರು

ವಿಜಯಪುರ,ಮಾ.೧೩- ನನ್ನ ಹಾಗೂ ನನ್ನ ಕುಟುಂಬ, ಆಪ್ತರ ದೂರವಾಣಿ ಕರೆಗಳ ವಿವರ( ಕಾಲ್ ಡಿಟೈಲ್ಸ್) ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.
ನನ್ನ ಹಾಗೂ ನನ್ನ ಕುಟುಂಬ ಮತ್ತು ಆಪ್ತರ ಕಾಲ್ ಡಿಟೇಲ್ಸ್ ಯಾರಿಗೂ ನೀಡಬಾರದೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಕ್ಷೇತ್ರ ಬಬಲೇಶ್ವರದಲ್ಲಿ ಕೆಲವರು ದುರುದ್ದೇಶದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನನ್ನ ಮೊಬೈಲ್ ಕರೆ ಮಾಹಿತಿ, ನನ್ನ ಪತ್ನಿ ಆಶಾ ಪಾಟೀಲ್, ಸಹೋದರ ಹಾಗೂ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ್, ಪುತ್ರ ಬಸನಗೌಡ ಪಾಟೀಲ್, ಹಾಗೂ ಬಿಎಲ್?ಡಿಇ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಇದು ವೈಯಕ್ತಿಕ ಮಾಹಿತಿ ಕಸಿಯುವ ಯತ್ನವಾಗಿರುತ್ತದೆ. ಈ ಕಾರಣ ನಮ್ಮೆಲ್ಲರ ಕಾಲ್ ಹಿಸ್ಟರಿಗಳನ್ನ ಯಾರಿಗೂ ನೀಡದಂತೆ ಮನವಿ. ನಮ್ಮೆಲ್ಲರ ಕಾಲ ಹಿಸ್ಟರಿಗಳನ್ನ ಯಾರಿಗೂ ನೀಡದಂತೆ ಸಂಬಂಧಿಸಿದ ಸಿಮ್? ಏಜೆನ್ಸಿ ಹಾಗೂ ಪೊಲೀಸ್ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ಸೂಚಿಸಲು ದೂರಿನಲ್ಲಿ ಎಂಬಿ ಪಾಟೀಲ್ ಉಲ್ಲೇಖ ಮಾಡಿದ್ದಾರೆ.
ಒಂದು ವೇಳೆ ನಮ್ಮೆಲ್ಲರ ಕಾಲ್ ಹಿಸ್ಟರಿ ನೀಡಿದರೆ ಅದಕ್ಕೆ ಎಜೆನ್ಸಿ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಹೊಣೆಯಾಗುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂಬಿ ಪಾಟೀಲ್ ದೂರು ದಾಖಲಿಸಿದ್ದಾರೆ.