ಕಾಮಗಾರಿಗೆ ಭೂಮಿಪೂಜೆ


ಬ್ಯಾಡಗಿ,ಮಾ.23: ಬಿಜೆಪಿ ಸರ್ಕಾರದ ಪ್ರಸಕ್ತ 4ವರ್ಷಗಳ ಅಧಿಕಾರದವಧಿಯಲ್ಲಿಯೇ ಬ್ಯಾಡಗಿ ಮತಕ್ಷೇತ್ರದ ಇತಿಹಾಸದಲ್ಲಿ ಅತಿದೊಡ್ಡ ಮೊತ್ತದ ನೀರಾವರಿ ಕಾಮಗಾರಿಗಳನ್ನು ಕೇವಲ ಒಂದೇ ಅವಧಿಯಲ್ಲಿ ಮಂಜೂರಾತಿ ನೀಡಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ತಾವು ಉಳಿಸಿಕೊಂಡಿದ್ದೇವೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ 50ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಗುಂಡಯ್ಯ ಬ್ರಹ್ಮಯ್ಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ 271ಕೋಟಿ ರೂಗಳ ಅನುದಾನವನ್ನು ಘೋಷಿಸಿ, ಬಿಡುಗಡೆ ಮಾಡಿದ್ದು ಕೇವಲ 71ಕೋಟಿರೂಗಳನ್ನು ಮಾತ್ರ ಎಂದು ಹೇಳಿದರಲ್ಲದೇ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ನಾಲ್ಕು ವರ್ಷಗಳಲ್ಲಿ 1614 ಕೋಟಿರೂ ಅನುದಾನವನ್ನು ಹಾವೇರಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಒದಗಿಸಿದ್ದೇವೆ ಎಂದು ಹೇಳಿದರು.
ಪಿಎಲ್’ಡಿ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ಗ್ರಾಮದ ಗುಂಡಯ್ಯ ಬ್ರಹ್ಮಯ್ಯ ಭಕ್ತಾದಿಗಳ ಬಹುವರ್ಷಗಳ ಸಮುದಾಯ ಭವನದ ಕನಸು ಇಂದು ನನಸಾಗುತ್ತಿದೆ. ಶಾಸಕರ ಸತತ ಪ್ರಯತ್ನದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂಗಳ ವೆಚ್ಚದಲ್ಲಿ ಅಭಿವೃಧ್ದಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರ ಒಡನಾಡಿಯಾಗಿ ಸಂಬಂಧವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ದಿಂಡದಹಳ್ಳಿ ಹಾಗೂ ಕದಮನಹಳ್ಳಿ ಶಾಖಾಮಠದ ಶ್ರೀಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮುಖಂಡರಾದ ವಿ.ವಿ.ಹಿರೇಮಠ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ವಿಜಯ ಬಳ್ಳಾರಿ, ಯಲ್ಲನಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಪಾರ್ವತಿ ಶಿಗ್ಗಾವಿ, ಸದಸ್ಯರಾದ ನಿಂಗನಗೌಡ ಪಾಟೀಲ, ಮಂಜಣ್ಣ ಯತ್ನಳ್ಳಿ, ಶಿವಯೋಗಿ ಹುಣಸಿಕಟ್ಟಿ, ಲಲಿತಾ ದೇಶಗತ್ತಿ, ಪರಶುರಾಮ ಚನ್ನಗಿರಿ, ಮಾಜಿಸೈನಿಕ ವೀರಭದ್ರಗೌಡ ಪಾಟೀಲ, ವೀರಣ್ಣ ಪಟ್ಟಣಶೆಟ್ಟಿ, ಸುರೇಶ ಉದ್ಯೋಗಣ್ಣನವರ, ಪಿಡಿಓ ಮಲ್ಲೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಪ್ಪ ಕರೇಣ್ಣನವರ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.