
ಯಾದಗಿರಿ : ನ.20: ನಾಗರಿಕರ ಸಮಸ್ಯೆ ಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲ ವಾಗುವಂತೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಬಗ್ಗೆಯೂ ಸೂಕ್ತ ಅರಿವು ಹಾಗೂ ಜಾಗೃತಿ ಮುಡಿಸುವಂತೆ ರಾಜ್ಯ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರಕ್ಕೆ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜನರಿಗೆ ಸಕಾಲಕ್ಕೆ ಸ್ಪಂದಿಸುವ ಗುರಿಯೊಂದಿಗೆ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳೆರಡೂ ಕಾರ್ಯ ನಿರ್ವಹಿಸುತ್ತಿವೆ. ಕಾನೂನು ಸೇವಾ ಪ್ರಾಧಿಕಾರದಿಂದ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾನೂನಿನ ಅರಿವು ಜೊತೆಗೆ ಲೋಕ್ ಅದಾಲತ್ ಮೂಲಕ ಪ್ರಕರಣ ಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುತ್ತಿರುವುದು ಜನರಿಗೆ ನೆರವಾಗಿದೆ. ಅದೇ ರೀತಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆಯೂ ಜಾಗೃತಿ ಮುಡಿಸಿದ್ದಲ್ಲಿ ಇನ್ನೂ ಹೆಚ್ಚಿನ ಜನರ ಸಮಸ್ಯೆ ಗಳ ನಿವಾರಣೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.
ನ್ಯಾಯದಾನದ ಮೂಲಕ ಜನರ ಬಳಿಗೆ ಹೋಗುವ ಅನುವು ಕಾನೂನು ಸೇವಾ ಪ್ರಾಧಿಕಾರ ಕ್ಕೆ ದೊರೆತಿದೆ. ತ್ವರಿತ ನ್ಯಾಯದಾನದಲ್ಲಿ ಇದು ಪರಿಣಾಮಕಾರಿಯಾಗಿದೆ. ಅದರಂತೆ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕ ಆಡಳಿತ ದಲ್ಲಿ ಪಾರದರ್ಶಕತೆ, ಸಮಾನತೆ , ನಿಷ್ಪಕ್ಷಪಾತ ಕಾಯ್ದುಕೊಳ್ಳಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದು, ಈ ಎರಡೂ ಸಂಸ್ಥೆ ಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಚ್ಚಿನ ಜನರಿಗೆ ನೆರವಾಗುತ್ತಿದೆ ಎಂದು ಅವರು ಹೇಳಿದರು.
ಸಮಾಜದ ಅತ್ಯಂತ ಬಡ ಹಾಗೂ ಹಿಂದುಳಿದವರನ್ನು ಸ್ಪಂದಿಸಲು ಸದಾವಕಾಶ ನಮಗೆ ಲಭಿಸಿದೆ. ಸಮಾಜದ ಒಳತಿಗಾಗಿ, ಉತ್ತಮ ಸಾರ್ವಜನಿಕ ಆಡಳಿತಕ್ಕಾಗಿ, ನ್ಯಾಯಾಂಗ ವ್ಯವಸ್ಥೆ , ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದರಿಂದ ಹೆಚ್ಚಿನ ಜನರಿಗೆ ನೆರವಾಗಲಿದೆ. ಅದರಂತೆ ಸರ್ಕಾರದ ಸವಲತ್ತು ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಲಿದೆ ಎಂದು ಹೇಳಿದರು.
ನ್ಯಾಯ ಕೋರಿ ಲೋಕಾಯುಕ್ತ ಸಂಸ್ಥೆ ಗೆ ಬರುವ ಕೆಲವು ಅರ್ಜಿಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಹಸ್ತಾಂತರಿಸುವರಿಂದ ನ್ಯಾಯಾಲಯ ವ್ಯಾಪ್ತಿಗೆ ಬರುವ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಕ್ರಮಕ್ಕೆ ಅನುಕೂಲ ವಾಗುವ ಜೊತೆಗೆ ಉತ್ತಮ ಆಡಳಿತಕ್ಕೂ ನೆರವಾಗಲಿದೆ. ಈ ಎರಡೂ ಸಂಸ್ಥೆಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದರಿಂದ ಸರ್ಕಾರಕ್ಕೆ ಪ್ರೇರಣೆಯಾಗುವ ಜೊತೆಗೆ ಸಕಾಲಕ್ಕೆ ನಾಗರಿಕರಿಗೆ ಸವಲತ್ತು ಗಳು ದೊರೆಯಲಿವೆ. ಅಧಿಕಾರಿಗಳು ಮತ್ತು ಜನರ ಸೇವೆಯಲ್ಲಿ ತೊಡಗಿರುವವರು ಪರಿಶುದ್ಧರಾಗಿ ಕಾರ್ಯ ನಿರ್ವಹಿಸುವ ಮೂಲಕ ದೀನ ದುರ್ಬಲರ ರಕ್ಷಣೆಗೆ ನೆರವಾಗಲು ಅವರು ಸಲಹೆ ನೀಡಿದರು.
ಆನ್ಲೈನ್ ಮೂಲಕ ಉಪನ್ಯಾಸ ನೀಡಿದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಜೇಂದ್ರ ಅವರು ಮಾತನಾಡಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಕೆ.ಎನ್.ಫಣೀಂದ್ರ ಅವರ ಕಾರ್ಯ ಸಕಾರಾತ್ಮಕ ಕ್ರಮವಾಗಿದೆ. ಇದರಿಂದ ಬೆಂಗಳೂರಿಗೆ ನಾಗರಿಕರು ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಯಾದಗಿರಿ 12 ನೇ ಜಿಲ್ಲೆಯಾಗಿ ಭೇಟಿ ನೀಡುವ ಮೂಲಕ ಅವರು ಆಡಳಿತ ಸುಧಾರಣೆ ಗೆ ಮತ್ತು ದೂರುಗಳ ಸ್ಪಂದನೆ ಗೆ ನೆರವಾಗಿದ್ದು, ತ್ವರಿತ ನ್ಯಾಯದಾನಕ್ಕೂ ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಜಯಂತಕುಮಾರ್ ಅವರು ಸ್ವಾಗತಿಸಿದರು. ಯಾದಗಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಅಶ್ರಿನ್ ನಿರೂಪಿಸಿದರು. ಶಹಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಿದ್ಧರಾಮ
ಟಿ.ಪಿ ಉಪ ಲೋಕಾಯುಕ್ತರ ಪರಿಚಯ ನೀಡಿದರು.
ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಶ್ರೀ ಶಶಿಕಾಂತ ಭಾವಿಕಟ್ಟಿ, ಉಪ ನಿಬಂಧಕರು ಚನ್ನಕೇಶವ ರೆಡ್ಡಿ ಎಂ.ವಿ, ಜಿಲ್ಲಾ ಮತ್ತು ಸೇಷನ್ ನ್ಯಾಯಾಧೀಶರು , ಮಾನ್ಯ ಉಪ ಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪ್ರಲ್ಹಾದ್ ರಾವ್ ಮುತಾಲಿಕ್ ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ. ರವೀಂದ್ರ ಎಲ್. ಹೊನೋಲೆ. ಯಾದಗಿರಿ ಲೋಕಾಯುಕ್ತ ಡಿ ಎಸ್ ಪಿ ಹನುಮಂತರಾಯ, ಇತರರು ಉಪಸ್ಥಿತರಿದ್ದರು.