
ಕೋಲಾರ,ಮೇ,೬-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಕಾರ ಸಂಘಗಳಿಂದ ನೀಡಿರುವ ೨೨,೨೭೦ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವುದಾಗಿ ಸಿದ್ಧರಾಮಯ್ಯ ವರುಣಾದಲ್ಲಿ ಘೋಷಣೆ ಮಾಡಿದ್ದಾರೆ, ಇದು ಕಾಂಗ್ರೆಸ್ ೬ನೇ ಗ್ಯಾರಂಟಿಯಾಗಿದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲೂಕಿನ ಬೀಚಗೊಂಡಹಳ್ಳಿ, ಹರಟಿ ಆಗ್ರಹಾರ ಗ್ರಾಮಗಳಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಮತ್ತು ರೋಡ್ ಶೋ ಮೂಲಕ ಮತಯಾಚನೆ ಸಂದರ್ಭದಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ಸಹಕಾರ ಸಂಘಗಳಿಗೆ ಕಟ್ಟಬೇಕಾಗಿರುವ ೨೨೨೭೦ ಕೋಟಿ ರೂ.ಗಳ ಬಾಕಿ ಹಣವನ್ನು ಮನ್ನಾ ಮಾಡುವುದಾಗಿ ಶುಕ್ರವಾರ ಘೋಷಣೆ ಮಾಡಿದ್ದಾರೆ, ಇದರಿಂದ ಕೋಲಾರ ಜಿಲ್ಲೆಯಲ್ಲಿ ೭೦೦ರಿಂದ ೮೦೦ ಕೋಟಿ ರೂ.ಗಳು ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಆಗಲಿದೆ ಎಂದರು.
ಈಗಾಗಲೇ ಡಿಸಿಸಿ ಬ್ಯಾಂಕ್ ನೀಡಲಾಗುತ್ತಿರುವ ೫೦ ಸಾವಿರ ರೂ.ಗಳನ್ನು ೧ ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು ಹಾಗೂ ರೈತರಿಗೆ ೧೦ ಲಕ್ಷ ತನಕ ಬಡ್ಡಿರಹಿತ ಸಾಲವನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿರುವ ಹಾಗೂ ಘೋಷಣೆ ಮಾಡಿರುವ ಎಲ್ಲ ಭರವಸೆಗಳನ್ನು ಜಾರಿಗೊಳಿಸಲಾಗುವುದು, ನುಡಿದಂತೆ ನಡೆಯುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂಬುವುದಕ್ಕೆ ಈ ಹಿಂದೆ ಕಾಂಗ್ರೇಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ ೯೯ ರಷ್ಟು ಈಡೇರಿಸಿರುವುದೇ ನಿದರ್ಶನವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ ಸಿದ್ಧರಾಮಯ್ಯನವರು ಸ್ತ್ರೀಶಕ್ತಿ ಸಂಘಗಳವರು ಬಾಕಿ ಉಳಿಸಿಕೊಂಡಿರುವ ಕಂತುಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಸಾವಿರಾರು ಕೋಟಿ ರೂ.ಗಳು ಮನ್ನಾ ಮಾಡಿದ್ದಂತೆ ಆಗುತ್ತದೆ. ಆರ್ಥಿಕವಾಗಿ ಕಷ್ಟವಿರುವ ಸಂದರ್ಭದಲ್ಲಿ ಸಿದ್ಧರಾಮಯ್ಯ ಘೋಷಣೆ ಮಾಡಿರುವುದು ಮಹಿಳೆಯರಿಗೆ ಸಂತಸ ಮೂಡುವಂತಾಗಿದೆ ಎಂದು ಹೇಳಿದರು.
ಶಾಸಕ ಶ್ರೀನಿವಾಸಗೌಡರ ಮಗ ಮಂಜುನಾಥ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್, ಬೀಚಗೊಂಡ್ಲಹಳ್ಳಿ ಅಂಬರೀಶ್, ಕ್ಯಾಲನೂರು ಅನಿಲ್, ತಿಪ್ಪೇನಹಳ್ಳಿ ನಾಗೇಶ್ ಮುಂತಾದವರು ಇದ್ದರು.