
ಕಲಬುರಗಿ:ಸೆ.17:ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ವಸತಿ ಮಹಾವಿದ್ಯಾಲಯದಲ್ಲಿ ಆಚರಿಸಲಾದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಕಲ್ಬುರ್ಗಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಬೀಮಣ್ಣ ಘನಾತೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಭಾರತವು ಬ್ರಿಟಿಷರ ಆಳ್ವಿಕೆಯಿಂದ 1947 ಆಗಸ್ಟ್ 15 ರಂದು ಸ್ವತಂತ್ರವಾದರೆ ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನವು 1948 ಸೆಪ್ಟೆಂಬರ್ 17ರಂದು ಸ್ವತಂತ್ರವಾಯಿತು . ಹೈದರಾಬಾದ್ ಕರ್ನಾಟಕವನ್ನು ನಾವಿಂದು ಕಲ್ಯಾಣ ಕರ್ನಾಟಕವೆಂದು ಸಂಬೋಧಿಸುತಿದ್ದೇವೆ . ಹೈದರಾಬಾದ್ ನಿಜಾಮಾನ್ ಭಾರತದ ಒಕ್ಕೂಟಕ್ಕೆ ತಾನು ಸೇರುವುದಿಲ್ಲವೆಂದು ವಾದಿಸುತ್ತಿದ್ದಾಗ ಸರ್ದಾರ್ ವಲ್ಲಭಾಯಿ ಪಟೇಲರ ನೇತೃತ್ವದಲ್ಲಿ ಪೋಲಿಸ್ ಕಾರ್ಯಾಚರಣೆಯ ಮೂಲಕ ಹೈದ್ರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲಾಯಿತು . ರಜಾಕಾರರ ಹಾವಳಿಯಿಂದ ಈ ಭಾಗ ತತ್ತರಿಸಿ ಹೋಗಿತ್ತು . ಗೂಟ ಗ್ರಾಮದಲ್ಲಿ 200 ಕ್ಕಿಂತ ಹೆಚ್ಚು ಜನರ ಹತ್ಯೆ ಮಾಡಲಾಯಿತು 20 ಮಹಿಳೆಯರನ್ನು ಅತ್ಯಾಚಾರ ಮಾಡಲಾಯಿತು . ರಜಾಕರ ಈ ದೌರ್ಜನ್ಯದ ವಿರುದ್ಧ ಪೋಲಿಸ್ ಕಾರ್ಯಾಚರಣೆ ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ತ್ಯಾಗ ಬಲಿದಾನಗಳ ಫಲವಾಗಿರುವ ಸ್ವಾತಂತ್ರ್ಯವನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕು ಮಕ್ಕಳ ಹೆಗಲ ಮೇಲೆ ಈ ಜವಾಬ್ದಾರಿ ಇದೆ ಎಂದು ಅರ್ಥಪೂರ್ಣವಾಗಿ ನುಡಿದರು . ಮಕ್ಕಳು ಏಕಾಗ್ರತೆಯಿಂದ ಪಾಠವನ್ನು ಕೇಳಿ ಜೀವನದಲ್ಲಿ ಮಹತ್ವದ ಗುರಿಯೊಂದನ್ನು ಇರಿಸಿಕೊಂಡು ಜೀವನ ಯಶಸ್ವಿಗೊಳಿಸಿಕೊಳ್ಳಬೇಕೆಂದು ನುಡಿದರು .
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಿನೋದ್ ಕುಮಾರ್ ಎಲ್ ಪತಂಗೆ ಅವರು ಅಧ್ಯಕ್ಷತೆಯನ್ನು ವಹಿಸಿದರು . ಡಾ.ಆನಂದ ಸಿದ್ಧಾಮಣಿ ಅವರು ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು