ಕಲಬುರಗಿ,ಜೂ.6: ನೂತನ ಸಿದ್ಧರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಆಯಾ ಜಿಲ್ಲೆಯಿಂದ ಶಾಸಕರಾಗಿ ಮಂತ್ರಿಗಳಾಗಿರುವವರನ್ನೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು. ವಿಶೇಷವಾಗಿ ಹಿಂದುಳಿದ 371ನೇ(ಜೆ) ಕಲಂ ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಕಲ್ಯಾಣದ ಆಯಾ ಜಿಲ್ಲೆಗಳ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನಾತಿ ನೇಮಕ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಒತ್ತಾಯಿಸಿದ್ದಾರೆ.
ಈ ಹಿಂದಿನ ಸರಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಹುತೇಕ ಜಿಲ್ಲೆಗಳಿಗೆ ಬೇರೆ ಭಾಗದ್ಫ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೂ ಇದರಿಂದ ಅಭಿವೃದ್ಧಿ ಕಾರ್ಯಗಳು ನಡೆಯದೆ ಪ್ರಗತಿ ಪರಿಶೀಲನೆಗಳು ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ ಮಾಡಲಾಗಿತ್ತು. ಬೀದರ ಜಿಲ್ಲೆ ಸೇರಿದಂತೆ, ಕಲ್ಯಾಣದ ಅನೇಕ ಜಿಲ್ಲೆಗಳಲ್ಲಿ 15ನೇ ಆಗಸ್ಟ, 17ನೇ ಸೆಪ್ಟೆಂಬರ್ದಂತಹ ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬದಂದು ಉಸ್ತುವಾರಿ ಸಚಿವರು ಬಾಗವಹಿಸದೆ ಸಚಿವರ ಅನುಪಸ್ಥಿತಿಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಕಾರ್ಯಕ್ರಮಗಳು ನಡೆಸಿಕೊಂಡು ಹೋಗಿದ್ದರು. ಬೇರೆ ಜಿಲ್ಲೆಯ ಸಚಿವರ ನೇಮಕದಿಂದ ಅಭಿವೃದ್ಧಿ ಕುಂಟಿತವಾಗುವದಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯಮಟ್ಟದಲ್ಲಿ ನಾಯಕತ್ವವೂ ಸಹ ಬೆಳೆಯುವದಿಲ್ಲ. ಹಿಂದಿನ ಸರಕಾರದ ಪ್ರಯೋಗದ ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಆಯಾ ಜಿಲ್ಲಾ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ರಚನಾತ್ಮಕ ಅಭಿವೃದ್ಧಿಗೆ, 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ, ನಮ್ಮ ಪಾಲಿನ ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಎಲ್ಲಾ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನೂತನ ಸರಕಾರ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿ ಆಯಾ ಜಿಲ್ಲೆಯ ಸಚಿವರನ್ನೇ ಜಿಲ್ಲೆಯ ಉಸ್ತುವಾರಿ ನೀಡಲು ಸರಕಾರಕ್ಕೆ ಸಮಿತಿ ಆಗ್ರಹಿಸಿದೆ.