
ಬ್ಯಾಡಗಿ,ಮೇ11: ಶಾಲೆಗಳ ಮೂಲಸೌಕರ್ಯಕ್ಕಿಂತ ಹೆಚ್ಚು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ಶಿಕ್ಷಣದಲ್ಲಿ ಹಿಂದೆ ಬಿದ್ದಿರುವ ಮಕ್ಕಳನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಮೇಲಕ್ಕೆತ್ತಲು ಪ್ರಯತ್ನಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾರುತಿ ತಳವಾರ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಚೇತನ ಕಾರ್ಯಕ್ರಮದಲ್ಲಿ ಉಚಿತವಾಗಿ ಬ್ಯಾಗುಗಳನ್ನು ವಿತರಿಸಿ ಮಾತನಾಡಿದ ಅವರು, ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಶಿಕ್ಷಣ ಮುಂದುವರೆಸಿ, ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಿದೆ. ಮಕ್ಕಳು ದಿನ ನಿತ್ಯ ಹೇಳಿದ ಪಾಠವನ್ನು ಗಮನವಿಟ್ಟು ಕೇಳಿ ಮನದಲ್ಲಿ ಮನನ ಮಾಡಿಕೊಂಡಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಉಪನ್ಯಾಸಕ ಪರಮೇಶ ಮುಳಗುಂದ ಮಾತನಾಡಿ, ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಕಾರ್ಯದಲ್ಲಿ ದುಡಿಮೆಯ ಅಲ್ಪ ಭಾಗವನ್ನು ಸಮಾಜದ ಬಡವರಿಗೆ ವಿದ್ಯಾರ್ಥಿಗಳಿಗೆ ಅಗತ್ಯ ನೆರವಿನ ರೂಪದಲ್ಲಿ ಸಹಾಯ ಸಹಕಾರವನ್ನು ಒದಗಿಸಲು ಮುಂದಾದರೆ ಸಮಾಜದಲ್ಲಿ ಉತ್ತಮ ಸಮಾನತೆಯ ಪರಿಸರ ಸೃಷ್ಟಿಯಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬೋವಿ, ಬಸವರಾಜ ಬನ್ನಿಹಟ್ಟಿ, ಉಮೇಶ ಬನ್ನಿಹಟ್ಟಿ, ಚಂದ್ರು ಮುಳಗುಂದ, ಯಲ್ಲಪ್ಪ ಗಡ್ಡದವರ, ಮಂಜುನಾಥ ಹಾದಿಮನಿ, ಮೇಘಾ ಸತ್ಯಮೂರ್ತಿ, ಮಂಜುನಾಥ ಬಿಲ್ಲಣ್ಣನವರ, ಬಸಪ್ಪ ಕೆಪ್ಪಲಿಂಗಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.