ಕರ್ನಾಟಕಕ್ಕಾಗಿ ನವ ಸೂತ್ರಗಳ ಕೆಆರ್ ಎಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ

ದಾವಣಗೆರೆ.ಮಾ.೨೭; ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕೃತಿಕ, ಹಸಿರು ಕರ್ನಾಟಕಕ್ಕಾಗಿ ಪಕ್ಷದಿಂದ ನವ ಸೂತ್ರಗಳ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಕೆಅರ್ ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಮಲ್ಲಪ್ಪ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನಗಳನ್ನು ರೂಪಿಸಬೇಕು‌ ಜತೆಗೆ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರ ಜೊತೆ ಮತ್ತು ಚಿಂತಕರು ಹಾಗೂ ತಜ್ಞರ ಜೊತೆ ಹಲವಾರು ಸಭೆಗಳು ಮತ್ತು ಸಂವಾದಗಳನ್ನು ನಡೆಸಿದ ನಂತರ ಪಕ್ಷವು ಈ  ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು ಮಾಹಿತಿ ನೀಡಿದರು.ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ,  ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ. ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯ ನಿಷೇಧ. ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲ್ಲೂಕಿಗೊಂದು ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತ ನಿರ್ಮಾಣ, ಉದ್ಯೋಗಸೃಷ್ಟಿ ಗ್ರಾಮಸ್ವರಾಜ್ಯ, ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮ ಕೈಗೊಳ್ಳಲು ಮುಂದಾಗಲಾಗುವುದು ಎಂದು ಹೇಳಿದರು.ಸಾಲಮುಕ್ತ ರೈತ, ಬಡತನಮುಕ್ತ ಹಳ್ಳಿಗಳು, ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ. ರಾಜ್ಯದ ಪ್ರತಿ ಹಳ್ಳಿ, ಪಟ್ಟಣಕ್ಕೂ ಮಳೆ ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ. ರಾಜ್ಯದ ಪ್ರತಿ ಕೆರೆ ಮತ್ತು ಬಂಜರು ಭೂಮಿಗಳಲ್ಲಿ ಗ್ರಾಮ ಪಂಚಾಯಿತಿ ಮಾಲೀಕತ್ವದಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ, ಸ್ಥಳೀಯವಾಗಿ ಪರಿಸರಸ್ನೇಹಿ ವಿದ್ಯುತ್‌ ಉತ್ಪಾದನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.